ಮೊಬೈಲ್ ಆರ್ಡರ್ ಮಾಡಿ ಪ್ರತಿಷ್ಠಿತ ಕಂಪೆನಿಗೆ ವಂಚಿಸುತ್ತಿದ್ದ ಆರೋಪ: ಓರ್ವನ ಬಂಧನ

ಬೆಂಗಳೂರು, ಮಾ.12: ಆನ್ಲೈನ್ನಲ್ಲಿ ಮೊಬೈಲ್ ಆರ್ಡರ್ ಮಾಡಿ ಡೆಲಿವರಿ ಬಾಯ್ಗೆ ಗೊತ್ತಾಗದಂತೆ ಪಾರ್ಸೆಲ್ನಲ್ಲಿದ್ದ ಮೊಬೈಲ್ ತೆಗೆದುಕೊಂಡು ಬಳಿಕ ಆರ್ಡರ್ ರದ್ದು(ರಿಜೆಕ್ಟ್) ಮಾಡಿ ಪ್ರತಿಷ್ಠಿತ ಕಂಪೆನಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬನಶಂಕರಿಯ ಯಾರಬ್ ನಗರದ ನಿವಾಸಿ ಉಮೇರ್ ಎಂದು ಗುರುತಿಸಲಾಗಿದೆ. ವಂಚನೆ ಸಂಬಂಧ ಅಮೆಜಾನ್ ಕಂಪೆನಿಯ ಪ್ರತಿನಿಧಿ ತರುಣ್ ವರ್ಮಾ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಉಮೇರ್ ಅಮೆಜಾನ್ ಕಂಪೆನಿಯಲ್ಲಿ ಕೆಲ ದಿನಗಳ ಕಾಲ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಹಣಕಾಸಿನ ಅವ್ಯವಹಾರ ಸಂಬಂಧ ಕಂಪೆನಿಯು ಈತನನ್ನು ಕೆಲಸದಿಂದ ತೆಗೆದು ಹಾಕಿತ್ತು.
ಇದಾದ ಬಳಿಕ ಆನ್ಲೈನ್ನಲ್ಲಿ ಆರೋಪಿಯು ಮೊಬೈಲ್ ಆರ್ಡರ್ ಮಾಡಿದ್ದು ಈತನ ನಿವಾಸಕ್ಕೆ ಡೆಲಿವರಿ ಬಾಯ್ ಪಾರ್ಸೆಲ್ ತಂದುಕೊಟ್ಟಿದ್ದ. ಪಾರ್ಸೆಲ್ ಸ್ವೀಕರಿಸಿ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಮೊಬೈಲ್ ಬಾಕ್ಸ್ ಸಮೇತ ಮನೆಗೆ ಹೋಗಿದ್ದಾನೆ. ಕೆಲ ಹೊತ್ತಿನ ಬಳಿಕ ಮನೆಯಿಂದ ಹೊರಬಂದು ನನ್ನ ಬಳಿ ಇರುವ ಹಣ ಸಾಕಾಗುತ್ತಿಲ್ಲ ಎಂದು ಹೇಳಿ ಆರ್ಡರ್ ರಿಜೆಕ್ಟ್ ಮಾಡಿದ್ದಾನೆ.
ಇದೇ ರೀತಿ ಮೂರು ಬಾರಿ ಆನ್ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಿ ಇದೇ ತಂತ್ರ ಅನುಸರಿಸಿ ವಂಚಿಸಿದ್ದ. ಪಾರ್ಸೆಲ್ನಲ್ಲಿ ಮೊಬೈಲ್ ಇಲ್ಲದಿರುವ ಬಗ್ಗೆ ತಡವಾಗಿ ಅರಿತ ಕಂಪೆನಿಗೆ ಸತತ ಮೂರು ಬಾರಿ ಆರ್ಡರ್ ಮಾಡಿ ರಿಜೆಕ್ಟ್ ಮಾಡಿದ್ದ ಉಮೇರ್ ಮೇಲೆ ಅನುಮಾನ ಬಂದಿತ್ತು. ಈ ಸಂಬಂಧ ಕಂಪೆನಿಯ ಪ್ರತಿನಿಧಿ ತರುಣ್ ವರ್ಮಾ ಅವರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಅನುಮಾನದ ಮೇರೆಗೆ ಉಮೇರ್ ನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಹಣಕ್ಕಾಗಿ ವಂಚಿಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







