ಪ್ರಮೋದ್ ಮಧ್ವರಾಜ್ ವಿರುದ್ಧ ವಂಚನೆ ಆರೋಪ : ಕೇಂದ್ರ ಮಾಹಿತಿ ಆಯೋಗದಿಂದ ಟಿ.ಜೆ.ಅಬ್ರಾಹಂ ಅರ್ಜಿ ವಜಾ

ಪ್ರಮೋದ್ ಮಧ್ವರಾಜ್
ಉಡುಪಿ, ಮಾ.12: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಸಿಂಡಿಕೇಟ್ ಬ್ಯಾಂಕ್ನಲ್ಲಿ ವಂಚನೆ ಆರೋಪಕ್ಕೆ ಸಂಬಂಧಿಸಿ ಆರ್ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಮಾಹಿತಿ ಆಯೋಗದ ವಜಾಗೊಳಿಸಿದೆ.
ಟಿ.ಜೆ.ಅಬ್ರಾಹಂ, ಪ್ರಮೋದ್ ಮಧ್ವರಾಜ್ ಸಿಂಡಿಕೇಟ್ ಬ್ಯಾಂಕಿನಲ್ಲಿ ವಂಚನೆ ಎಸಗಿದ್ದಾರೆ ಮತ್ತು ಅದರಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ಕೆಲವು ದಾಖಲೆಗಳನ್ನು ನೀಡುವಂತೆ ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ (ಸಿಪಿಐಓ) ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲಿಸಿದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಯವರು ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದು, ಖಾಸಗಿ ಮಾಹಿತಿಯನ್ನು ಕೇಳಿರುವುದರಿಂದ ದೂರನ್ನು ವಜಾಗೊಳಿಸಲಾಗಿತ್ತು.
ಮಾಹಿತಿ ಹಕ್ಕು ಅರ್ಜಿ ವಜಾಗೊಳಿಸಿರುವುದನ್ನು ಪ್ರಶ್ನಿಸಿ, ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ ಅಬ್ರಾಹಂ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲದಿರುವುದರಿಂದ ಸಂಪೂರ್ಣ ಮಾಹಿತಿ ನೀಡುವಂತೆ ಮತ್ತು ಕ್ರಮಕೈಗೊಳ್ಳುವಂತೆ ಮೇಲ್ಮನವಿ ಸಲ್ಲಿಸಿದ್ದರು.
ದೂರುದಾರರ ಅರ್ಜಿಯನ್ನು ಪರೀಶೀಲಿಸಿದ ಮೇಲ್ಮನವಿ ಪ್ರಾಧಿಕಾರವು ಕೇಂದ್ರ ಮಾಹಿತಿ ಅಧಿಕಾರಿ ನೀಡಿರುವ ಆದೇಶವು ಸರಿಯಾಗಿದ್ದು, ಬ್ಯಾಂಕಿ ನವರು ಈಗಾಗಲೇ ನೀಡಿದ ಮಾಹಿತಿಯಲ್ಲದೆ, ಇತರ ಖಾಸಗಿ ಮಾಹಿತಿ ನೀಡಲು ಅವಕಾಶವಿಲ್ಲ ಎನ್ನುವುದನ್ನು ಎತ್ತಿಹಿಡಿಯಿತು.
ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿಗೆ ಸೋಲಾದ ಬಳಿಕವೂ ದೂರುದಾರರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ದಾಖಲಿಸಿದ್ದರು. ಕೇಂದ್ರ ಮಾಹಿತಿ ಆಯೋಗವು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿ ದೂರುದಾರರು ಮತ್ತು ಮಾಹಿತಿ ಅಧಿಕಾರಿಗಳಿಂದ ಹೆಚ್ಚುವರಿ ವಿವರ ಪಡೆಯಿತು.
ಪ್ರಮೋದ್ ಮಧ್ವರಾಜ್, ಬ್ಯಾಂಕಿನ ಪ್ರತಿಷ್ಟಿತ ಗ್ರಾಹಕರಾಗಿದ್ದು, ಸಾಲ ಮಂಜೂರಾತಿ ನೀಡುವ ಸಂದರ್ಭದಲ್ಲಿ ಬ್ಯಾಂಕಿನ ಕಾನೂನು ಹಾಗೂ ನಿಯಮ ಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆ ಎಂದು ಅಧಿಕಾರಿಗಳು ಬ್ಯಾಂಕಿನ ಪರವಾಗಿ ಆಯೋಗಕ್ಕೆ ಮಾಹಿತಿ ನೀಡಿದರು.
ವಿಷಯ ಪರಾಮರ್ಷೆ ನಡೆಸಿದ ಮಾಹಿತಿ ಆಯೋಗವು ಅಬ್ರಾಹಂ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ, ದೂರುದಾರರು ನೀಡಿರುವ ಅರ್ಜಿ ಯು ಸಾರ್ವಜನಿಕ ಹಿತಾಸಕ್ತಿಯಾಗಿರದೆ ಖಾಸಗಿ ಮಾಹಿತಿ ಕೇಳಿದ್ದು, ಇದನ್ನು ಬಹಿರಂಗಪಡಿಸಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿತು. ಈ ಹಿಂದೆ ನೀಡಲಾಗಿರುವ ಎರಡೂ ಆದೇಶಗಳನ್ನು ಎತ್ತಿ ಹಿಡಿದ ಕೇಂದ್ರ ಮಾಹಿತಿ ಆಯೋಗವು ಟಿ.ಜೆ.ಅಬ್ರಾಹಂ ನೀಡಿದ ಅರ್ಜಿಯನ್ನು ವಜಾಗೊಳಿಸಿತು.







