ಸಿಬಿಐಗೆ ಪೂರ್ಣಾವಧಿ ನಿರ್ದೇಶಕರ ನೇಮಕಾತಿ ಕೋರಿ ಸುಪ್ರೀಂಗೆ ಮೊರೆ
ಹೊಸದಿಲ್ಲಿ,ಮಾ.12: ಸಿಬಿಐ ಪೂರ್ಣಾವಧಿ ನಿರ್ದೇಶಕರೊಬ್ಬರನ್ನು ನೇಮಕಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂಕೋಟ್ ಈ ಬಗ್ಗೆ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಕೋರಿದೆ.
ಫೆಬ್ರವರಿ 2ರಂದು ರಿಶಿ ಕುಮಾರ್ ಶರ್ಮಾ ಅವರ ಅಧಿಕಾರಾವಧಿ ಪೂರ್ತಿಯಾದ ಬಳಿಕ ದಿಲ್ಲಿ ವಿಶೇಷ ಪೊಲೀಸ್ ಸಂಸ್ಥಾಪನಾ (ಡಿಎಸ್ಪಿಇ) ಕಾಯ್ದೆಯ ಸೆಕ್ಷನ್ 4ಎ ಪೂರ್ಣಾವಧಿಯ ಸಿಬಿಐ ನಿರ್ದೇಶಕರೊಬ್ಬರನ್ನು ನೇಮಿಸಲು ಕೇಂದ್ರ ಸರಕಾರವು ವಿಫಲವಾಗಿದೆ. ಎಂದು ಆಪಾದಿಸಿ ಎನ್ಜಿಓ ಸಂಸ್ಥೆ ಕಾಮನ್ ಕಾಸ್ , ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿತ್ತು.
ಬದಲಿಗೆ ಅದು ಪ್ರವೀಣ್ ಸಿನ್ಹಾ ಅವರನ್ನು ಸಿಬಿಐನ ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿದೆ ಎಂದು ಅದು ಅರ್ಜಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಇಂದು ಅರ್ಜಿಯನ್ನುವ ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರಕ್ಕೆ ನೋಟಿಸ್ ನೀಡಿದೆ. ಎರಡು ವಾರಗಳೊಳಗೆ ಉತ್ತರಿಸುವಂತೆಯೂ ಅದು ಸೂಚಿಸಿದೆ.
ಎನ್ಜಿಓ ಪರವಾಗಿ ವಾದಿಸಿದ ನ್ಯಾಯವಾದಿ ಪ್ರಶಾಂತ್ಭೂಷಣ್ ಅವರು, ಪೂರ್ಣಾವಧಿಯ ನಿರ್ದೇಶಕರ ನೇಮಕವಿಲ್ಲದೆ ಸಿಬಿಐ ಬಾಧಿತವಾಗಿದೆ ಎಂದು ಆರೋಪಿಸಿದರು.
ಕನಿಷ್ಠ ಪಕ್ಷವ ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯ ಸಭೆಯನ್ನಾದರೂ ಕರೆಯುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕೆಂದು ಭೂಷಣ್ ನ್ಯಾಯಾಲಯವನ್ನು ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠವು ಈ ವಿಚಾರವಾಗಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸುವುದಾಗಿ ತಿಳಿಸಿತು.