ಕಂದಹಾರ್ ವಿಮಾನ ಅಪಹರಣದ ವೇಳೆ "ನನ್ನನ್ನು ಒತ್ತೆಯಾಳಾಗಿಸಿ ಪ್ರಯಾಣಿಕರನ್ನು ಬಿಡುಗಡೆ ಮಾಡಿ" ಎಂದಿದ್ದ ಮಮತಾ ಬ್ಯಾನರ್ಜಿ
ಹಿಂದಿನ ಘಟನೆ ಮೆಲುಕು ಹಾಕಿದ ಯಶ್ವಂತ್ ಸಿನ್ಹಾ
ಕೊಲ್ಕತ್ತಾ: ಕಂದಹಾರ್ ವಿಮಾನ ಅಪಹರಣ 1999ರಲ್ಲಿ ಸಂಭವಿಸಿದ ಸಂದರ್ಭ ಆಗ ಕೇಂದ್ರ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಪ್ರಯಾಣಿಕರ ಸುರಕ್ಷಿತ ಬಿಡುಗಡೆಗಾಗಿ ತಾವು ಒತ್ತೆಯಾಳಾಗಲು ಸಿದ್ಧರಿರುವುದಾಗಿ ಹೇಳಿದ್ದನ್ನು ಇಂದು ಟಿಎಂಸಿಗೆ ಸೇರಿದ ಮಾಜಿ ಬಿಜೆಪಿ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ನೆನಪಿಸಿಕೊಂಡಿದ್ದಾರೆ.
"ಇಂಡಿಯನ್ ಏರ್ ಲೈನ್ಸ್ ವಿಮಾನವನ್ನು ಅಪಹರಿಸಿ ಕಂದಹಾರ್ಗೆ ಕೊಂಡೊಯ್ಯಲ್ಪಟ್ಟಾಗ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆದಿತ್ತು. ಭಾರತೀಯ ಪ್ರಯಾಣಿಕರನ್ನು ಬಿಡುಗಡೆಗೊಳಿಸಬೇಕೆಂಬ ಷರತ್ತಿನೊಂದಿಗೆ ತಾವು ಒತ್ತೆಯಾಳಾಗಿ ಹೋಗಲು ಆಗ ಮಮತಾ ಜಿ ಮುಂದೆ ಬಂದರು. ಆಕೆ ಆ ತ್ಯಾಗಕ್ಕಾಗಿ ಸಿದ್ಧರಿದ್ದರು" ಎಂದು ಸಿನ್ಹಾ ಹೇಳಿದರು.
ಕಂದಹಾರ್ ವಿಮಾನ ಅಪಹರಣ ನಡೆದಾಗ ಮಮತಾ ಬ್ಯಾನರ್ಜಿ ರೈಲ್ವೆ ಸಚಿವೆಯಾಗಿದ್ದರು.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಜತೆ ತಾವು ಹೊಂದಿದ್ದ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಂಡ ಸಿನ್ಹಾ, ಆಕೆ ಆರಂಭದಿಂದಲೂ 'ಹೋರಾಟಗಾರ್ತಿ'ಯಾಗಿದ್ದರು ಎಂದು ಹೇಳಿದರು.
"ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಆಕೆಯ ಜತೆಗೆ ಕೆಲಸ ಮಾಡಿದ್ದೇನೆ, ಆಕೆ ಆಗಲೂ ಹೋರಾಟಗಾರ್ತಿಯಾಗಿದ್ದರು ಈಗಲೂ ಹೋರಾಟಗಾರ್ತಿಯಾಗಿದ್ದಾರೆ" ಎಂದು ಸಿನ್ಹಾ ಮೆಚ್ಚುಗೆಯ ಮಾತುಗಳನ್ನಾಡಿದರು.