ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ತಿರುವು: ವಿಡಿಯೋ ಬಿಡುಗಡೆ ಮಾಡಿದ ಸಂತ್ರಸ್ತ ಯುವತಿ

ಬೆಂಗಳೂರು, ಮಾ.13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಉದ್ಯೋಗದ ಆಮಿಷವೊಡ್ಡಿ ನನಗೆ ವಂಚನೆ ಮಾಡಿದ್ದಾರೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವುದು ಎನ್ನಲಾದ ಯುವತಿ ಮೊಲದ ಬಾರಿಗೆ 34 ಸೆಕೆಂಡುಗಳ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು, ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ಈ ವೀಡಿಯೊದಿಂದ ನನ್ನ ಮನೆ ಬಳಿ ಜನ ಬಂದು ಕೇಳುತ್ತಿದ್ದಾರೆ. ನನ್ನ ಮಾನವೇ ಹರಾಜಾಗಿದ್ದು, ರಮೇಶ್ ಜಾರಕಿಹೊಳಿ ಅವರೇ ವೀಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ದೂರಿದ್ದಾರೆ.
ನನ್ನ ತಂದೆ-ತಾಯಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದಿರುವ ಆಕೆ, ವೀಡಿಯೊ ಹೇಗೆ ಮಾಡಿದ್ದು ಎಂಬುವುದು ಗೊತ್ತಿಲ್ಲ. ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕೋರುತ್ತೇನೆ ಎಂದಿದ್ದಾರೆ.
ಮುಂದುವರಿದ ಶೋಧ
ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದು, ಇಲ್ಲಿನ ದೇವನಹಳ್ಳಿ, ಬೆಂಗಳೂರು ಸೇರಿದಂತೆ ವಿವಿಧೆಡೆ ಶನಿವಾರ ದಾಳಿ ನಡೆಸಿದರು. ಈ ವೇಳೆ ಹಲವರ ಮೊಬೈಲ್ಗಳನ್ನು ವಶಕ್ಕೆ ಪಡೆದು, ಪ್ರಾಥಮಿಕ ತನಿಖೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.







