ಕುಂಭಮೇಳ ಯಾತ್ರಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದ ಉತ್ತರಾಖಂಡ ಸಿಎಂ!

Photo credit: Twitter @TIRATHSRAWAT
ಡೆಹ್ರಾಡೂನ್, ಮಾ.14: ಎಪ್ರಿಲ್ 1ರಿಂದ 30ರವರೆಗೆ ಹರಿದ್ವಾರದಲ್ಲಿ ನಡೆಯುವ ಕುಂಭ ಮೇಳದಲ್ಲಿ ಭಾಗವಹಿಸಲು ಆಗಮಿಸುವ ಭಕ್ತಾದಿಗಳಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ TheTimes of Indiaಗೆ ಸಂದರ್ಶನ ನೀಡಿದ ಅವರು, "ತ್ರಿವೇಂದ್ರ ಸಿಂಗ್ ರಾವತ್ ಸರಕಾರ ಎಸ್ಓಪಿ ಬಿಡುಗಡೆ ಮಾಡಿ, ಎಲ್ಲ ಯಾತ್ರಿಗಳಿಗೆ ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ ಎಂದು ಹೇಳಿತ್ತು. ಆದರೆ ಕೋವಿಡ್-19 ನೆಗೆಟಿವ್ ವರದಿಯ ಅಗತ್ಯತೆಯನ್ನು ಕಿತ್ತುಹಾಕುವ ನಿರ್ಧಾರ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಕುಂಭಮೇಳದಲ್ಲಿ ಭಾಗವಹಿಸಲು ಯೋಚಿಸುತ್ತಿರುವ ಭಕ್ತಾದಿಗಳ ಮನಸ್ಸಿನಲ್ಲಿ ಸಂದೇಹಗಳಿದ್ದು, ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ" ಎಂದು ಪ್ರತಿಪಾದಿಸಿದರು.
"ಕುಂಭ ಮೇಳ ನಡೆಯುತ್ತಿರುವುದು 12 ವರ್ಷಗಳಿಗೊಮ್ಮೆ. ಈ ಹಬ್ಬದ ಅನುಭವ ಆಸ್ವಾದಿಸುವ ಅವಕಾಶವನ್ನು ಜನತೆಗೆ ತಪ್ಪಿಸಲಾಗದು" ಎಂದರು. ಲಕ್ಷಾಂತರ ಮಂದಿ ಕುಂಭಮೇಳಕ್ಕೆ ಆಗಮಿಸುವುದರಿಂದ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸುವುದು ಅಥವಾ ನೆಗೆಟಿವ್ ವರದಿಗಳ ಪರಿಶೀಲನೆ ಮಾಡುವುದು ಕಾರ್ಯಸಾಧುವಲ್ಲ" ಎಂದು ಹೇಳಿದರು.
"ಸಂತರ, ಭಕ್ತರ, ವ್ಯಾಪಾರಿಗಳ ಹಾಗೂ ಸ್ಥಳೀಯ ಸಂತೋಷವನ್ನು ನಾವು ಬಯಸುತ್ತೇವೆ. ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ನಾವು ಖಾತರಿಪಡಿಸುತ್ತೇವೆ. ಕುಂಭಮೇಳದಲ್ಲಿ ಅಗತ್ಯ ಆರೋಗ್ಯ ಮೂಲಸೌಕರ್ಯ ಕಲ್ಪಿಸುತ್ತೇವೆ ಎಂದು ತಿಳಿಸಿದರು.







