ತಂದೆಯ ಅಂತ್ಯ ಸಂಸ್ಕಾರಕ್ಕೆ ಹೂ ತರಲು ತೆರಳಿದ್ದ ಪುತ್ರ ಅಪಘಾತಕ್ಕೆ ಬಲಿ
ಶಿರಸಿಯಲ್ಲಿ ಹೃದಯ ವಿದ್ರಾವಕ ಘಟನೆ: ಇನ್ನೋರ್ವ ಯುವಕ ಕೂಡಾ ಮೃತ್ಯು

ಶಿರಸಿ, ಮಾ.15: ಇಂದು ಬೆಳಗ್ಗೆ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೂ ತರಲೆಂದು ಮಾರುಕಟ್ಟೆಗೆ ತೆರಳಿದ್ದ ಪುತ್ರನೋರ್ವ ವಾಹನ ಅಪಘಾತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶಿರಸಿ ನಗರದ ಎಸ್.ಬಿ.ಐ. ಸರ್ಕಲ್ ಬಳಿ ಸೋಮವಾರ ನಡೆದಿದೆ. ಅಪಘಾತದಲ್ಲಿ ಇನ್ನೋರ್ವ ಯುವಕ ಕೂಡಾ ಮೃತಪಟ್ಟಿದ್ದಾನೆ.
ಶಿರಸಿಯ ಗಣೇಶ ನಗರ ನಿವಾಸಿ ರವಿಚಂದ್ರ ವಡ್ಡರ್ (34) ಮತ್ತು ಸುನೀಲ್ ಇಂದೂರ (26) ಮೃತಪಟ್ಟವರಾಗಿದ್ದಾರೆ.
ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ರವಿಚಂದ್ರರ ತಂದೆ ಹನುಮಂತಪ್ಪ ಇಂದು ಬೆಳಗ್ಗೆ ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರ ವಿಧಿವಿಧಾನ ನೆರವೇರಿಸುವುದಕ್ಕಾಗಿ ಹೂವು ತರಲೆಂದು ಸುನೀಲ್ ಜೊತೆ ರವಿಚಂದ್ರ ಬೈಕಿನಲ್ಲಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಬೈಕಿಗೆ ಬಸ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಇಬ್ಬರೂ ಬಸ್ಸಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





