ನದಿ ಒಳಹರಿವು ಆಧರಿಸಿ ಕುಡಿಯುವ ನೀರು ಸರಬರಾಜು: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಮಾ.16: ನದಿ ನೀರಿನ ಒಳ ಹರಿವಿನ ಲಭ್ಯತೆಯನ್ನು ಆಧರಿಸಿ ಕುಡಿಯುವ ನೀರಿನ ಸರಬರಾಜನ್ನು ಅಗತ್ಯ ಎಚ್ಚರಿಕಾ ಕ್ರಮ ಗಳನ್ನು ಕೈಗೊಂಡು ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಕುರಿತ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬೇಸಿಗೆಯಿಂದಾಗಿ ನದಿಯ ನೀರಿನ ಮೂಲಗಳು ಬತ್ತುವುದರೊಂದಿಗೆ ನದಿಯಲ್ಲಿ ನೀರಿನ ಹರಿವು ದಿನೇದಿನೇ ಕ್ಷೀಣಿಸುತ್ತಿದೆ. ಸಾಮಾನ್ಯವಾಗಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲಗಳು ನದಿಯ ನೀರು ಆಧಾರವಾಗಿದ್ದು, ಮುಂದಿನ ಮಾನ್ಸೂನ್ ಮಳೆ ಪ್ರಾರಂಭದವರೆಗೆ ಲಭ್ಯತೆ ಯನ್ನು ಆಧರಿಸಿ ಕುಡಿಯುವ ನೀರಿನ ಸರಬರಾಜನ್ನು ಮಾಡಬೇಕೆಂದು ಸೂಚನೆ ನೀಡಿದರು. ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಜನಸಾಮಾನ್ಯರಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಕುಡಿಯುವ ನೀರು ಸರಬರಾಜು ಕೊಳವೆಗಳಲ್ಲಿ ಆಗುತ್ತಿರುವ ಸೋರಿಕೆಯ ದುರಸ್ತಿ ಕಾರ್ಯಗಳನ್ನು ತಕ್ಷಣದಲ್ಲಿಯೇ ಕೈಗೊಳ್ಳಬೇಕು. ನಲ್ಲಿ ನೀರಿನ ಪೈಪ್ಗಳಿಗೆ ನೇರವಾಗಿ ಕೆಲವರು ಪಂಪ್ಗಳನ್ನು ಅಳವಡಿಸಿ ನೀರನ್ನು ಸೆಳೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆಯೂ ಸಹ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕು ಎಂದರು.
ನದಿಯ ನೀರಿನ ಲಭ್ಯತೆ ಅಲ್ಲದೆ ಇತರ ನೀರಿನ ಮೂಲಗಳನ್ನು ಗುರುತಿಸಿ ಅವುಗಳ ಬಳಕೆಗೆ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು. ನೀರಿನ ಲಭ್ಯತೆಯ ಪ್ರಮಾಣ ಅವುಗಳ ಸರಬರಾಜಿನ ಮೇಲ್ವಿಚಾರಣೆ ನಡೆಸಲು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಸೂಚನೆ ನೀಡಿದರು.
ನದಿ ಪಾತ್ರದ ಅಕ್ಕಪಕ್ಕದ ಕೃಷಿ ಜಮೀನುಗಳಿಗೆ ನೀರು ಹಾಯಿಸಲು ಅನಧಿಕೃತ ಪಂಪು ಸೆಟ್ಗಳನ್ನು ತೆರವುಗೊಳಿಸಲು ಮೆಸ್ಕಾಂ ಅಧಿಕಾರಿ ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಮಹಾಪೌರ ಪ್ರೇಮಾನಂದ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್, ಪ್ರೊಬೇಶನರಿ ಐ.ಎ.ಎಸ್. ಅಧಿಕಾರಿ ಮೋನಾ ರೋತ್ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
‘ವಾಣಿಜ್ಯ ಬಳಕೆಗೆ ನೀರು ಸ್ಥಗಿತ’
ಸಾರ್ವಜನಿಕರು ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಲು ಅರಿವು ಮೂಡಿಸುವುದರೊಂದಿಗೆ ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಮನವರಿಕೆ ಮಾಡಿಕೊಡಬೇಕು. ವಾಣಿಜ್ಯ ಬಳಕೆಗೆ ಸಂಪರ್ಕ ನೀಡಿರುವ ನಲ್ಲಿ ನೀರಿನ ಸೌಲಭ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.







