ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ: ಶಾಫಿ ಸಅದಿ ಸ್ಪಷ್ಟನೆ

ಬೆಂಗಳೂರು, ಮಾ.17: ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕಗಳನ್ನು ಬಳಸಿಕೊಂಡು ಅಝಾನ್ ನೀಡುವುದನ್ನು ನಿರ್ಬಂಧಿಸಿಲ್ಲ. ಈ ಬಗ್ಗೆ ಸಮುದಾಯದಲ್ಲಿ ಅನಗತ್ಯ ಗೊಂದಲ ನಿರ್ಮಾಣವಾಗಿದೆ ಎಂದು ರಾಜ್ಯ ವಕ್ಫ್ ಬೋಡ್ ಸದಸ್ಯ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಸಾಲಿನ ಡಿಸೆಂಬರ್ 19ರಂದು ನಡೆದ ನಮ್ಮ ಮಂಡಳಿಯ ಸಭೆಯಲ್ಲಿ 2017ರ ಜುಲೈ 10ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿ ಹೊರಡಿಸಿದ್ದ ಸುತ್ತೋಲೆಯ ಬಗ್ಗೆ ಒಂದು ವಿಷಯ ಇತ್ತು. ಆದರೆ, ಈ ಬಗ್ಗೆ ಮಂಡಳಿಯ ಸಭೆಯಲ್ಲಿ ವಿಶಾಲವಾಗಿ ಚರ್ಚೆ ನಡೆದಿಲ್ಲ. ಈಗ ಹೊರಡಿಸಿರುವ ಸುತ್ತೋಲೆಯು 2017ರಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯ ಯಥಾ ಪ್ರತಿಯಾಗಿದೆ ಎಂದರು.
ಈ ಸುತ್ತೋಲೆಯಿಂದಾಗಿ ಫಝರ್ ನಮಾಝ್ಗಾಗಿ ನೀಡುವ ಅಝಾನ್ ಬಗ್ಗೆ ಆತಂಕ ಇದೆ ಎಂದು ಗೊಂದಲ ಸೃಷ್ಟಿಯಾಗಿದೆ. ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಸ್ಪಷ್ಟವಾಗಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕ ಬಳಸಬಹುದೆಂದು ಸ್ಪಷ್ಟಪಡಿಸಲಾಗಿದೆ. ಈ ಸುತ್ತೋಲೆಯಲ್ಲಿ ಎಲ್ಲಿಯೂ ಅಝಾನ್ ಅನ್ನು ಧ್ವನಿವರ್ಧಕವನ್ನು ಬಳಸಿಕೊಂಡು ನೀಡಬಾರದು ಎಂದು ಚಕಾರವೆತ್ತಿಲ್ಲ. ಆದರೆ, ಒಂದು ಉರ್ದು ಪತ್ರಿಕೆಯಲ್ಲಿ ‘ಫಝರ್ ಅಝಾನ್ಗೆ ವಕ್ಫ್ ಬೋರ್ಡ್ನಿಂದ ನಿರ್ಬಂಧ’ ಎಂಬ ತಲೆ ಬರಹದಲ್ಲಿ ಸುದ್ದಿ ಪ್ರಕಟವಾಗಿದೆ. ಇದರಿಂದ ರಾಜ್ಯಾದ್ಯಂತ ತಪ್ಪು ಮಾಹಿತಿ ಹರಡಲು ಕಾರಣವಾಗಿದೆ ಎಂದು ಅವರು ಹೇಳಿದರು.
ಫಝರ್ ಅಝಾನ್ ಸಮೇತ ಯಾವುದೆ ಹೊತ್ತಿನ ನಮಾಝ್ಗಾಗಿ ನೀಡುವ ಅಝಾನ್ ವಿಚಾರದಲ್ಲಿ ಯಾವುದೆ ಗೊಂದಲ ಇಲ್ಲ. ಈ ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಅದನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಶಾಫಿ ಸಅದಿ ಹೇಳಿದರು.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದೇ ರೀತಿ 1986ರ ಕೇಂದ್ರ ಸರಕಾರದ ಪರಿಸರ ಸಂರಕ್ಷಣಾ ಕಾಯ್ದೆಯಡಿ ಶಿಕ್ಷಾರ್ಹ ಹಾಗೂ ದಂಡನಾರ್ಹವಿದೆ. ಪಶ್ಚಿಮ ಬಂಗಾಳದಲ್ಲಿ ಈ ಸಂಬಂಧ ಹಲವು ಮೌಲಾನಗಳ ವಿರುದ್ಧ ಪ್ರಕರಣಗಳು ದಾಖಲಾಗಿ, ಎಫ್ಐಆರ್ ಗಳು ದಾಖಲಾಗಿವೆ. ಹೈಕೋರ್ಟ್ ನಲ್ಲಿ ಕಳೆದ ಸಾಲಿನ ಅಕ್ಟೋಬರ್ ನಲ್ಲಿ ಪಿಐಎಲ್ ದಾಖಲಾಗಿತ್ತು. 20 ಮಸೀದಿಗಳಲ್ಲಿ ಯಥೇಚ್ಛವಾಗಿ ಧ್ವನಿವರ್ಧಕ ಬಳಕೆ ಎಂದು ನಾವು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳ ಯಥೇಚ್ಛ ಬಳಕೆಗೆ ನಿರ್ಬಂಧವಿಸಿದೆಯೆ ಹೊರತು, ಫಝಾರ್ ನಮಾಝ್ ಸಂದರ್ಭದಲ್ಲಿ ನೀಡುವ ಅಝಾನ್ಗಾಗಿ ಅಲ್ಲ ಎಂದರು.
ಮುಸ್ಲಿಮರ ಹಿತವನ್ನು ಕಾಪಾಡುವ ಎಲ್ಲ ಜವಾಬ್ದಾರಿ ವಕ್ಫ್ ಬೋರ್ಡ್ ಮೇಲಿದೆ. ಮುಸ್ಲಿಮರ ಹಿತವನ್ನು ಕಾಪಾಡಲು ಸಾಧ್ಯವಾಗದಿದ್ದರೆ ವಕ್ಫ್ ಬೋರ್ಡ್ ಇದ್ದು ಪ್ರಯೋಜನವಿಲ್ಲ. ಅದನ್ನು ವಿಸರ್ಜನೆ ಮಾಡಬೇಕು ಅಷ್ಟೇ. ಮುಸ್ಲಿಮರು ದಿನದಲ್ಲಿ ಐದು ಹೊತ್ತು ನಿರ್ವಹಿಸುವ ಕಡ್ಡಾಯ ನಮಾಝ್ ಸಂದರ್ಭದಲ್ಲಿ ನೀಡುವ ಅಝಾನ್ ಅನ್ನು ಸಂರಕ್ಷಣೆ ಮಾಡುವ ಕೆಲಸವನ್ನು ವಕ್ಫ್ ಬೋರ್ಡ್ ಮಾಡುತ್ತದೆ ಎಂದು ಅವರು ಹೇಳಿದರು.
ನಮ್ಮ ಸಂವಿಧಾನದಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಿಗೆ ಬಾಧಕವಾಗುವಂತಹ ಯಾವುದೆ ಕಾಯ್ದೆಗಳು ಬಂದರೂ ಅದಕ್ಕೆ ವಕ್ಫ್ ಬೋರ್ಡ್ ಪ್ರೋತ್ಸಾಹ ನೀಡುವುದಿಲ್ಲ. ಸಮುದಾಯದ ಪರವಾಗಿ ವಕ್ಫ್ ಬೋರ್ಡ್ ನಿಲ್ಲಲಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ರಮಝಾನ್ ಸಂದರ್ಭದಲ್ಲಿ ಸಹರಿ ಬಗ್ಗೆ ಮಾಹಿತಿ ನೀಡಲು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಾರೆ. ಅದಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಶೀಘ್ರವೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಫಿ ಸಅದಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಕ್ಫ್ ಬೋರ್ಡ್ ಸದಸ್ಯ ಯಾಕೂಬ್ ಉಪಸ್ಥಿತರಿದ್ದರು.
ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಉಪ ಸಮಿತಿ ರಚನೆ
ವಕ್ಫ್ ಆಸ್ತಿಗಳ ಅಭಿವೃದ್ಧಿಗಾಗಿ ನಾವು ಎಲ್ಲ ಸಭೆಗಳಲ್ಲಿ ಚರ್ಚೆ ಮಾಡುತ್ತೇವೆ. ವಕ್ಫ್ ಆಸ್ತಿಗಳು, ಭೂಮಿಯನ್ನು ಶಿಕ್ಷಣ, ಆರೋಗ್ಯ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ, ಸದಸ್ಯರಾದ ಸಂಸದ ನಾಸೀರ್ ಹುಸೇನ್, ರಿಯಾಝ್ ಖಾನ್, ಶಾಫಿ ಸಅದಿ ಹಾಗೂ ಯಾಕೂಬ್ ಅವರನ್ನು ಒಳಗೊಂಡ ನಾಲ್ಕು ಮಂದಿಯ ಉಪ ಸಮಿತಿ ರಚನೆ ಮಾಡಲಾಗಿದೆ. ವಕ್ಫ್ ಆಸ್ತಿಗಳ ಅಭಿವೃದ್ಧಿಗಾಗಿ ಕೇವಲ ವಕ್ಫ್ ಬೋರ್ಡ್ ಅಷ್ಟೇ, ಅಲ್ಲ ಆಯಾ ಸಂಸ್ಥೆಗಳ ಪದಾಧಿಕಾರಿಗಳು ಗಮನ ಹರಿಸಿದಾಗ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯ.
-ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ವಕ್ಫ್ ಬೋರ್ಡ್ ಸದಸ್ಯ







