ಬಾಡಿಗೆದಾರನ ಮೇಲೆ ಹಲ್ಲೆ: ಬಿಜೆಪಿ ನಾಯಕಿ ಉಪಾಸನಾ ಮೋಹಪಾತ್ರ ವಿರುದ್ಧ ಪ್ರಕರಣ ದಾಖಲು

Photo: Twitter/@UpasnaMohapatra
ಭುವನೇಶ್ವರ, ಮಾ. 17: ಇಲ್ಲಿನ ಐಆರ್ಸಿ ಗ್ರಾಮದಲ್ಲಿ ಬಾಡಿಗೆದಾರನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ 30ಕ್ಕೂ ಅಧಿಕ ಗೂಂಡಾಗಳ ಗುಂಪಿನೊಂದಿಗೆ ಬಿಜೆಪಿ ನಾಯಕಿ ಉಪಾಸನಾ ಮೋಹಪಾತ್ರ ಅವರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
30ಕ್ಕೂ ಅಧಿಕ ಮಂದಿಯೊಂದಿಗೆ ಕಾಂಗ್ರೆಸ್ ನಾಯಕ ದಿವಂಗತ ಲಾಲತೇಂದು ವಿದ್ಯಾಧರ್ ಮೋಹಪಾತ್ರ ಅವರ ಪುತ್ರಿ ಉಪಾಸನಾ ಅವರು ಬಾಡಿಗೆದಾರ ಪ್ರಣವ್ ರಾಯ್ಗೆ ಹಲ್ಲೆ ನಡೆಸಿದ್ದಾರೆ ಹಾಗೂ ಅವರ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ, ನಗದು ಹಾಗೂ ಮೌಲ್ಯಯುತ ಸೊತ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಪಾಸನಾ ಹಾಗೂ 30ರಿಂದ 40 ವ್ಯಕ್ತಿಗಳು ನಯಾಪಲ್ಲಿ ಪೊಲೀಸ್ ವ್ಯಾಪ್ತಿಯಲ್ಲಿರುವ ನಮ್ಮ ಮನೆಗೆ ನುಗ್ಗಿದರು. ನಮಗೆ ಹಲ್ಲೆ ನಡೆಸಿದರು. ನಗದು ಹಾಗೂ ಮೌಲ್ಯಯುತ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡರು. ಬಾಡಿಗೆ ಮನೆ ಬಿಡುವಂತೆ ಬಲವಂತಪಡಿಸಿದರು ಎಂದು ದೂರುದಾರ ಆರೋಪಿಸಿರುವುದಾಗಿ ಭುವನೇಶ್ವರ ಡಿಸಿಪಿ ಉಮಾಶಂಕರ್ ದಾಸ್ ಹೇಳಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಭುವನೇಶ್ವರ ಡಿಸಿಪಿ ಹಾಗೂ ಇತರ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದರು.
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 17 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಉಪಾಸನಾ ಅವರನ್ನು ಓರ್ವ ಆರೋಪಿ ಎಂದು ಹೆಸರಿಸಲಾಗಿದೆ. ಅವರನ್ನು ಇದುವರೆಗೆ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







