ಶೀಘ್ರದಲ್ಲೇ ಕರ್ನಾಟಕದಲ್ಲಿ ದೇಶದ ಮೊದಲ ಸರಕಾರಿ ಒಡೆತನದ ಆಭರಣ ಮಳಿಗೆ ಆರಂಭ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.18: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಹಾಗೂ ರಾಷ್ಟ್ರದಲ್ಲೇ ಪ್ರಥಮ ಎನ್ನಲಾದ ಸರಕಾರಿ ಒಡೆತನದ ಆಭರಣಗಳ ಮಳಿಗೆ(ಜ್ಯುವೆಲ್ಲರಿ ಶಾಪ್) ರಾಜ್ಯದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಗುರುವಾರ ವಿಕಾಸಸೌಧದಲ್ಲಿ ಆಭರಣ ಮಳಿಗೆಗಳ ಮಾಲಕರ ಸಂಘದವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮಳಿಗೆಗಳನ್ನು ಸರಕಾರವೇ ನಿರ್ವಹಣೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಭರಣಗಳನ್ನು ತಯಾರಿಸಲಿದೆ. ಮೈಸೂರು ಸಿಲ್ಕ್, ಮೈಸೂರ್ ಸ್ಯಾಂಡಲ್ ಸೋಪ್, ಕಾವೇರಿ ಕೈ ಮಗ್ಗ (ಹ್ಯಾಂಡ್ ಲೂಮ್ಸ್) ಮಾದರಿಯಲ್ಲಿ ಸರಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ನಮ್ಮ ಇಲಾಖೆ ತೆಗೆದುಕೊಂಡಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಳಿಗೆಗಳನ್ನು ತೆರೆಯಲಾಗುವುದು. ಪ್ರಾರಂಭಿಕವಾಗಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ (ಟಯರ್ 1) ಈ ಮಳಿಗೆಗಳು ಕಾರ್ಯಾರಂಭ ಮಾಡಲಿದೆ. ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದರೆ, ಮುಂಬರುವ ದಿನಗಳಲ್ಲಿ ಹೊರರಾಜ್ಯಗಳಲ್ಲೂ ಈ ಆಭರಣ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ ಎಂದು ಅವರು ಹೇಳಿದರು.
ಚಿನ್ನದ ನಾಣ್ಯ ಬಿಡುಗಡೆ: ಮದುವೆ, ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಗ್ರಾಹಕರಿಗೆ ಉಡುಗೊರೆಯಾಗಿ ನೀಡಲು ಅನುಕೂಲವಾಗುವಂತೆ ಇನ್ನು ಮುಂದೆ ಕರ್ನಾಟಕದ ಹೆಮ್ಮೆಯ ಲಾಂಛನವಾದ ‘ಗಂಡುಬೇರುಂಡ’ ಗುರುತಿನ ಚಿನ್ನದ ನಾಣ್ಯಗಳನ್ನು ಹೊರತರಲು ಇಲಾಖೆ ತೀರ್ಮಾನಿಸಿದೆ. ಚಿನ್ನದ ನಾಣ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಆಭರಣ ಮಾಲಕರ ಸಂಘ ಸಭೆಯಲ್ಲಿ ಮನವಿ ಮಾಡಿತು. ಇದಕ್ಕೂ ಅಸ್ತು ಎಂದ ಸಚಿವ ನಿರಾಣಿ, ಶೀಘ್ರದಲ್ಲೇ ಆಭರಣ ಮಳಿಗೆಗಳಲ್ಲಿ ಚಿನ್ನದ ನಾಣ್ಯಗಳನ್ನು ಹೊರತರುವುದಾಗಿ ಘೋಷಣೆ ಮಾಡಿದರು.
ಚಿನ್ನದ ವಿಶೇಷ ಆರ್ಥಿಕ ವಲಯ ಸ್ಥಾಪನೆ: ಹಿಂದುಳಿದ ಕಲ್ಯಾಣ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿನ್ನದ ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡುವ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ ಮುರುಗೇಶ್ ನಿರಾಣಿ, ವಿಶೇಷ ಆರ್ಥಿಕ ವಲಯ ಸ್ಥಾಪನೆಯಾದರೆ, ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಲಿದ್ದಾರೆ. ಇದರಿಂದ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಚಿನ್ನದ ಉತ್ಪಾದನೆ ದ್ವಿಗುಣ: ಕರ್ನಾಟಕದಲ್ಲಿ ಈ ಬಾರಿ ಉತ್ಪಾದನಾ ಸಾಮರ್ಥ್ಯವನ್ನು ವರ್ಷದ ಅಂತ್ಯಕ್ಕೆ ದ್ವಿಗುಣಗೊಳಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರಕಾರ ಹಾಕಿಕೊಂಡಿದೆ. ಪ್ರಸ್ತುತ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ ವತಿಯಿಂದ 1500-1800 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಲಾಗುತ್ತದೆ. 2022ರ ವೇಳೆಗೆ ಉತ್ಪಾದನೆಯನ್ನು 5000 ಕೆ.ಜಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅತ್ಯಾಧುನಿಕ ಯಂತ್ರೋಪಕರಣಗಳಾದ ರಾಕ್ ಬ್ರೇಕರ್ಸ್, ಲೊಕೊ-ಲೋಡರ್ಸ್, ಜಂಬೊ ಡ್ರಿಲ್ಲಿಂಗ್, ಎಲ್ಎಚ್ಡಿಯ ಎಲ್ಪಿಡಿಟಿಗಳಂತಹ ಬಳಸಿಕೊಂಡು ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಹೆಚ್ಚು ಅಗತ್ಯವಿರುವ ತಾಂತ್ರಿಕ ಪರಿಣತಿಯನ್ನು ಅಳವಡಿಸಿಕೊಂಡು ಆಳವಾದ ಗಣಿಗಾರಿಕೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ಧವಾಗಬೇಕೆಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಅದಿರು ಸಂಸ್ಕರಣೆಯನ್ನು ಪ್ರಸ್ತುತ 2000 ಟನ್ಗಳಿಂದ ದಿನಕ್ಕೆ 3000 ಟನ್ಗಳಿಗೆ ಕೊಂಡೊಯ್ಯಲು ಮುಂದಾಗಬೇಕು. ಈ ಗಣಿಗಳ ಅಕ್ಕಪಕ್ಕಗಳಲ್ಲಿ ಭಾರತೀಯ ಭೂವೈಜ್ಞಾನಿಕ ಸಂಸ್ಥೆ ಖನಿಜ ಅನ್ವೇಷಣ ನಿಗಮ, ಹಟ್ಟಿ ಗೋಲ್ಡ್ ಮೈನ್ ಮತ್ತು ಖಾಸಗಿ ಸಂಸ್ಥೆಗಳು ಹೊಸ ಹೊಸ ಚಿನ್ನದ ಗಣಿಗಳನ್ನು ಪತ್ತೆ ಮಾಡಿವೆ. ಭೂಮಿ ಆಳದಲ್ಲಿ ನಡೆಯುವ ಗಣಿಗಾರಿಕೆ ನಡೆಸಲು ಕಾರ್ಮಿಕರನ್ನು ಕರೆದೊಯ್ಯುವ ವಾಹನ ಸಾಮರ್ಥ್ಯವನ್ನು 90ರಿಂದ 100ಕ್ಕೆ ಹೆಚ್ಚಿಸಬೇಕು. ಪ್ರಸ್ತುತ 20 ಕಾರ್ಮಿಕರನ್ನು ಕರೆದೊಯ್ಯುವ ಸಾಮರ್ಥ್ಯವಿದೆ. ಇದನ್ನು ಹೆಚ್ಚಳ ಮಾಡಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಮುರುಗೇಶ್ ನಿರಾಣಿ ಸಲಹೆ ಮಾಡಿದರು.
ನಮ್ಮಲ್ಲಿ 8 ಮಿಲಿಯನ್ ಕಬ್ಬಿಣದ ಅದಿರು ದಾಸ್ತಾನು ಇದೆ. ಸುಮಾರು 800 ಕೋಟಿ ರೂ.ಮೌಲ್ಯದ ಅದಿರು ಇದೆ. ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡುತ್ತೇವೆ. ಸಂಗ್ರಹವಿರುವ ಮಾರಾಟದಿಂದ ಸ್ಟೀಲ್ ಕಂಪನಿಗಳಿಗೆ ಕಚ್ಚಾ ವಸ್ತು ದೊರೆಯಲಿದೆ. ಸ್ಟೀಲ್ ಬೆಲೆ ಕೂಡ ಕಡಿಮೆಯಾಗಲಿದೆ. ಹಿರಾ-ಬುಡ್ಡಿನ್ನಿ ಗೋಲ್ಡ್ ಮೈನ್, ವೊಂಡಲ್ಲಿ ಗೋಲ್ಡ್ ಮೈನ್ - ಚಿನ್ನವನ್ನು ರಾಯಚೂರು ಜಿಲ್ಲೆಯ ಹಟ್ಟಿಚಿನ್ನದ ಗಣಿಗಳ ಪಕ್ಕದಲ್ಲಿರುವುದರಿಂದ ಚಿನ್ನವನ್ನು ಕರಗಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಹೆಸರು ಮರುನಾಮಕರಣ
ಹಟ್ಟಿ ಮೈನ್ಸ್ ಗೋಲ್ಡ್ ಇನ್ನು ಮುಂದೆ ‘ಕರ್ನಾಟಕ ರಾಜ್ಯ (ಹಟ್ಟಿ) ಚಿನ್ನದ ಗಣಿ’(ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್ಸ್) ಎಂದು ಮರು ನಾಮಕರಣವಾಗಿ ಬದಲಾಗಲಿದೆ. ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.







