ಮಂಗಳೂರು: ಬಾಲಕನಿಗೆ ಉಸಿರಾಟ ತೊಂದರೆ; ಎಕ್ಸ್ರೇ ತೆಗೆದಾಗ ಶ್ವಾಸಕೋಶದಲ್ಲಿ ಗುಂಡುಸೂಜಿ ಪತ್ತೆ!

ಮಂಗಳೂರು, ಮಾ.18: ಬಾಲಕನಿಗೆ ಕೆಮ್ಮು, ಉಸಿರಾಟ ತೊಂದರೆ, ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸಿ, ಎಕ್ಸ್ರೇ ತೆಗೆ ದಾಗ ಶ್ವಾಸಕೋಶದಲ್ಲಿ ಗುಂಡುಸೂಜಿ ಕಂಡು ಬಂದಿರುವ ಪ್ರಕರಣವೊಂದು ನಗರದ ಹೊರ ವಲಯದ ಬಜಾಲ್ನಿಂದ ವರದಿಯಾಗಿದೆ.
ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಮುಬಶ್ಶಿರ್ (12) ಎಂಬವರ ಶ್ವಾಸಕೋಶದಲ್ಲಿ ಗುಂಡುಸೂಜಿ ಪತ್ತೆಯಾಗಿದೆ.
ಸುಮಾರು 15 ದಿನಗಳಿಂದ ಮುಬಶ್ಶಿರ್ಗೆ ನಿರಂತವಾಗಿ ಕೆಮ್ಮು, ಜ್ವರ ಕಂಡುಬಂದಿತ್ತು. ಇದೊಂದು ಸಾಮಾನ್ಯ ರೋಗ ಲಕ್ಷಣವೆಂದು ಪರಿಗಣಿಸಿದ್ದ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದರೂ ಕೆಮ್ಮು ನಿಂತಿರಲಿಲ್ಲ. ಜ್ವರವೂ ಮತ್ತೆ ಕಾಡತೊಡಗಿತು. ಈ ಹಿನ್ನೆಲೆಯಲ್ಲಿ ಪೋಷಕರು ಆತನನ್ನು ತಜ್ಞ ವೈದ್ಯರಿಗೆ ತೋರಿಸಿದರು.
ಕಂಕನಾಡಿಯ ಮಕ್ಕಳ ತಜ್ಞವೈದ್ಯ ಡಾ.ರಾಮ್ಗೋಪಾಲ್ ಶಾಸ್ತ್ರಿಯವರಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಎಕ್ಸ್ರೇ ತೆಗೆಸಿದಾಗ ಮುಬಶ್ಶಿರ್ನ ಶ್ವಾಸಕೋಶದಲ್ಲಿ ಗುಂಡುಸೂಜಿ ಇರುವುದು ಪತ್ತೆಯಾದಾಗ ವೈದ್ಯರು ಸಹಿತ ಪೋಷಕರು ಆಶ್ವರ್ಯಚಕಿತರಾಗಿದ್ದರು. ಆದರೆ ಮುಬಶ್ಶೀರ್ ನಿಗೆ ಗುಂಡುಸೂಜಿ ಹೇಗೆ ಶ್ವಾಸಕೋಶ ಸೇರಿತೆಂದೇ ಗೊತ್ತಿಲ್ಲದಿರುವುದು ಮತ್ತೊಂದು ಅಚ್ಚರಿಯಾಗಿದೆ.
ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಬಳಸಲಾಗುವ ಗುಂಡುಸೂಜಿ ಪತ್ತೆಯಾಗಿದೆ. ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡಲೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು, ವೈದ್ಯಕೀಯ ಉಪಕರಣವೊಂದನ್ನು ಬಳಸಿ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆರಂಭದಲ್ಲಿ ತುಂಬಾ ಹೆದರಿದ್ದೆವು. ಎಲ್ಲವೂ ಸುಲಲಿತವಾಯಿತು
-ಸುಲೈಮಾನ್, ಬಾಲಕನ ಪೋಷಕರು







