ಕೊರೋನ ಲಾಕ್ಡೌನ್ ಸಂದರ್ಭ ಭಾರತದಲ್ಲಿ ಕೈದಿಗಳ ಮಾನವಹಕ್ಕು ಉಲ್ಲಂಘನೆ : ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ವರದಿ
ಸೋಂಕಿನಿಂದಾಗಿ ಹಲವಾರು ಕೈದಿಗಳು ಜೈಲುಗಳಲ್ಲೇ ಸಾವು

ಹೊಸದಿಲ್ಲಿ,ಮಾ.20: ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಕೈದಿಗಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ತನ್ನ ಇತ್ತೀಚಿನ ವರದಿಯೊಂದರಲ್ಲಿ ಗಮನಸೆಳೆದಿದೆ.
ಕಾರಾಗೃಹಗಳಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಯಲು ಸರಕಾರಗಳು ಕೈಗೊಂಡ ಕ್ರಮಗಳು ಅಸಮರ್ಪಕವಾಗಿದ್ದವು ಹಾಗೂ ಕೆಲವು ಪ್ರಕರಣಗಳಲ್ಲಿ ಮಾನವಹಕ್ಕುಗಳ ಉಲ್ಲಂಘನೆಗೆ ಎಡೆಮಾಡಿಕೊಟ್ಟಿರುವುದಾಗಿ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ತನ್ನ ‘‘ಫಾರ್ಗೊಟನ್ ಬಿಹೈಂಡ್ ಬಾರ್ಸ್: ಕೋವಿಡ್19 ಹಾಗೂ ಪ್ರಿಸನ್ಸ್’ ವರದಿಯಲ್ಲಿ ತಿಳಿಸಿದೆ.
ಕೊರೋನ ಹಾವಳಿ ತಡೆಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷದ ಮಾರ್ಚ್ 24ರಂದು ದಿಢೀರ್ನೇ ಸಂಪೂರ್ಣ ಲಾಕ್ಡೌನ್ ಘೋಷಿಸಿದ ಬೆನ್ನಲ್ಲೇ ದೇಶಾ ದ್ಯಂತದ ಜೈಲುಗಳಲ್ಲಿ ಕೈದಿಗಳನ್ನು ಭೌತಿಕವಾಗಿ ಭೇಟಿಯಾಗುವುದನ್ನು ನಿಷೇಧಿಸಲಾಗಿತ್ತು ಕೈದಿಗಳನ್ನು ಅವರ ನ್ಯಾಯವಾದಿಗಳು ಹಾಗೂ ಕುಟುಂಬ ಸದಸ್ಯರು ಸಂದರ್ಶಿಸುವುದನ್ನು ತಡೆಯಲಾಗಿತ್ತು. ಪರ್ಯಾಯವಾಗಿ ಅವರನ್ನು ವಿಡಿಯೋಕಾನ್ಫರೆನ್ಸ್ ಇತ್ಯಾದಿ ವಿಧಾನಗಳ ಮೂಲಕ ಭೇಟಿಯಾಗುವಂತಹ ವ್ಯವಸ್ಥೆಯನು ್ನಕೂಡಾ ಮಾಡಿರಲಿಲ್ಲವೆಂದು ಆ್ಯಮ್ನೆಸ್ಟಿ ವರದಿ ಗಮನಸೆಳೆದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೈದಿಗಳ ಭೇಟಿಗೆ ವಿಡಿಯೋಕಾನ್ಫರೆನ್ಸ್ ತಂತ್ರಜ್ಞಾನವನ್ನು ಅಳವಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಹಲವಾರು ರಾಜ್ಯಗಳು ಆ ನಿಟ್ಟಿನಲ್ಲಿ ಅಗತ್ಯವಾದ ಏರ್ಪಾಡುಗಳನ್ನು ಮಾಡುವಲ್ಲಿ ವಿಫಲವಾಗಿದ್ದವು.
ಕರ್ನಾಟಕ ಹಾಗೂ ಹರ್ಯಾಣ ರಾಜ್ಯಗಳ ಜೈಲುಗಳಲ್ಲಿ ಲಾಕ್ಡೌನ್ ಅವಧಿಯಲ್ಲಿ ಕೈದಿಗಳು ಎದುರಿಸಿದ್ದ ಪರಿಸ್ಥಿತಿಯ ಬಗ್ಗೆ ಆ್ಯಮ್ನೆಸ್ಟಿ ವರದಿ ಬೆಟ್ಟು ಮಾಡಿದೆ. ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 2020ರ ಡಿಸೆಂಬರ್ ಹಾಗೂ 2021ರ ಫೆಬ್ರವರಿ ವೇಳೆಗಷ್ಟೇ ವಿಡಿಯೋಕಾನ್ಫರೆನ್ಸಿಂಗ್ ಕಾರ್ಯಗತಗೊಂಡಿತೆಂದು ವರದಿ ಹೇಳಿದೆ.
ಕರ್ನಾಟಕದಲ್ಲಿ ಕೈದಿಗಳನ್ನು ಅವರ ಬಂಧುಗಳು ಕೇವಲ 5-10 ನಿಮಿಷ ವಿಡಿಯೋ ಕರೆ ಮಾಡಲು ಅವಕಾಶವಿತ್ತು. ಜಮ್ಮುಕಾಶ್ಮೀರದಲ್ಲಂತೂ ಕೈದಿಗಳಿಗೆ ತಮ್ಮ ಕುಟುಂಬಿಕರಿಗೆ 15 ದಿನಗಳಿಗೊಮ್ಮೆ ಮಾತ್ರವೇ ಫೋನ್ ಕರೆ ಮಾಡಲು ಅವಕಾಶ ನೀಡಲಾಗುತ್ತಿತ್ತು ಎಂಬುದಾಗಿಯೂ ವರದಿ ಹೇಳಿದೆ.
ಕಳೆದ ವರ್ಷ ಭಾರತದ ಹಲವಾರು ರಾಜ್ಯಗಳ ಕಾರಾಗೃಹಗಳಲ್ಲಿ ಕೋವಿಡ್19 ಸೋಂಕು ವರದಿಯಾಗಿದ್ದರೂ, ಅದನ್ನು ನಿಯಂತ್ರಿಸಲು ತೀರಾ ಅಲ್ಪ ಪ್ರಮಾಣದ ಕ್ರಮಗಳನ್ನಷ್ಟೇ ಕೈಗೊಳ್ಳಲಾಗಿತ್ತು. ಸೋಂಕಿನಿಂದಾಗಿ ಹಲವಾರು ಕೈದಿಗಳು ಜೈಲುಗಳಲ್ಲೇ ಸಾವನ್ನಪ್ಪಿದ್ದರು. ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಕೈದಿಗಳ ಸುರಕ್ಷತೆಗೆ ಆಗ್ರಹಿಸಿ ಮಾನವಹಕ್ಕು ಸಂಘಟನೆಗಳು ಆಗಾಗ್ಗೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ಗಳ ಮೆಟ್ಟಲನ್ನೇರಿದ್ದರೂ, ಯಾವುದೇ ಬದಲಾವಣೆಯಾಗಿರಲಿಲ್ಲ.
ಲಾಕ್ಡೌನ್ ಬೆನ್ನಲ್ಲೇ ಪಶ್ಚಿಮಬಂಗಾಳದ ಜೈಲುಗಳಲ್ಲಿ ಹಿಂಸಾಚಾರ ಭುಗಿಲೆದ್ದು, ನಾಲ್ವರು ಮೃತಪಟ್ಟು ಇತರ ಹಲವಾರು ಗಾಯಗೊಂಡಿದ್ದರು. ಅದೇ ರೀತಿ ದೇಶದ ಇತರ ಜೈಲುಗಳಲ್ಲಿಯೂ ಹಲವಾರು ಕೈದಿಗಳು ಉತ್ತಮ ಸೌಲಭ್ಯಗಳನ್ನು ಆಗ್ರಹಿಸಿ ಮುಷ್ಕರಕ್ಕಿಳಿದಿದ್ದರು ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ವರದಿ ಹೇಳಿದೆ.
ಪ್ರಸಕ್ತ ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಕೋವಿಡ್-19 ನಿರೋಧಕ ಲಸಿಕೆ ಅಭಿಯಾನವು ಭರದಿಂದ ಸಾಗುತ್ತಿದ್ದು, ಭಾರತದಲ್ಲಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ತನ್ನ ಮಾರ್ಗದರ್ಶಿ ಸೂತ್ರಗಳಲ್ಲಿ ಕಾರಾಗೃಹ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಲಸಿಕೆಗೆ ಪಡೆಯುವ ಆದ್ಯತಾ ಶ್ರೇಣಿಯ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಆದರೆ ಕೈದಿಗಳನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆಯೆಂದು ವರದಿ ಹೇಳಿದೆ.







