ಸೇನಾ ನೇಮಕಾತಿ ರ್ಯಾಲಿಗೆ ಆಗಮಿಸುವವರಿಗೆ ಸೂಕ್ತ ವಸತಿ ವ್ಯವಸ್ಥೆ : ಎಡಿಸಿ ಸದಾಶಿವ ಪ್ರಭು
ಉಡುಪಿ, ಮಾ.19: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಗೆ ಆಗಮಿಸುವವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಗ್ಗೆ ಇಂದು ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ದುಬಾಷ್, ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಉಡುಪಿ ತಹಶೀಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದ್ದಾರೆ.
ಶ್ರೀ ಕೃಷ್ಣ ಮಠದ ರಾಜಾಂಗಣ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ 1,000 ಮಂದಿಗೆ, ಅಂಬಲಪಾಡಿ ದೇವಾಲಯದಲ್ಲಿ 300, ಜಿ.ಶಂಕರ್ ಕಾಲೇಜಿನಲ್ಲಿ 700, ವಿವೇಕಾನಂದ ಶಾಲೆಯಲ್ಲಿ 200 ಹಾಗೂ ಬನ್ನಂಜೆ ಮಹಾಲಿಂಗೇಶ್ವರ ದೇವಾಲಯದಲ್ಲಿ 100 ಮಂದಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ವಸತಿ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಅಜ್ಜರಕಾಡು ಸೈನಿಕ ಸ್ಮಾರಕ ಬಳಿ 24X7 ಹೆಲ್ಪ್ಡೆಸ್ಕ್ ಆರಂಭಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರ್ಯಾಲಿಗೆ ಆಗಮಿಸಲು ನಿಗದಿಪಡಿಸಿದ ದಿನಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಅಭ್ಯರ್ಥಿಗಳು ಆಗಮಿಸುತ್ತಿದ್ದಾರೆ. ಅಲ್ಲದೆ ರ್ಯಾಲಿಯಲ್ಲಿ ಅನುತೀರ್ಣರಾದವರು ಇಲ್ಲಿಯೇ ಉಳಿಯುತ್ತಿದ್ದಾರೆ. ಇದರಿಂದ ವಸತಿ ಸಮಸ್ಯೆ ಉಂಟಾಗಿದೆ. ಶನಿವಾರದಿಂದ ಜಿ.ಶಂಕರ್ ಕಾಲೇಜನ್ನು ಸಂಪೂರ್ಣವಾಗಿ ರ್ಯಾಲಿಗೆ ಆಗಮಿಸುವವರ ವಸತಿ ವ್ಯವಸ್ಥೆಗೆ ಮೀಸಲಿಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.





