ಮೋದಿ ಸರಕಾರ ಬಾಂಬ್ ಹಾಕಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ: ರೈತ ನಾಯಕ ಡಾ.ದರ್ಶನ್ ಪಾಲ್
ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್

ಶಿವಮೊಗ್ಗ, ಮಾ.20: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಮೋದಿ ಸರ್ಕಾರ ನಮ್ಮ ಮೇಲೆ ಬಾಂಬ್ ಹಾಕಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ನಾಯಕ ಡಾ.ದರ್ಶನ್ ಪಾಲ್ ತಿಳಿಸಿದ್ದಾರೆ.
ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ದಿಲ್ಲಿಯ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್ ಮತ್ತು ಯುದುವೀರ್ ಸಿಂಗ್ರವರು ಭಾಗವಹಿಸಿ ಹೋರಾಟಕ್ಕೆ ಅಭೂತಪೂರ್ವ ಚಾಲನೆ ನೀಡಿದರು. ಐತಿಹಾಸಿಕ ಮಹಾಪಂಚಾಯತ್ನಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ರದ್ಧತಿಗೆ ಆಗ್ರಹಿಸಿದರು.
ಸಮಾವೇಶದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಡಾ.ದರ್ಶನ್ ಪಾಲ್, ದಿಲ್ಲಿಯ ಗಡಿಗಳಲ್ಲಿ ಕೂತಿರುವ ರೈತರು ದೇಶದ ಎಲ್ಲಾ ಭಾಗದಲ್ಲಿರುವ ರೈತರು ಈ ಆಂದೋಲನದ ಬಗ್ಗೆ ಏನು ಭಾವಿಸುತ್ತಾರೆ ಎಂದು ಯೋಚಿಸುತ್ತಿದ್ದಾರೆ. ನೀವು ಇಲ್ಲಿ ಸಹಸ್ರಾರು ಜನ ಒಟ್ಟು ಸೇರಿ ಆ ರೈತ ಬಂಧುಗಳಿಗೆ ಗಟ್ಟಿ ಸಂದೇಶ ನೀಡಿದ್ದೀರಿ. ನಾವು ಜೊತೆಗಿದ್ದೇವೆ ಎಂದು ನೀವು ಹೇಳಿದ್ದೀರಿ. ನಿಮಗೆ ಆನಂತ ಆನಂತ ಧನ್ಯವಾದಗಳು ಎಂದರು.
ಇಂದಿಗೆ ದಿಲ್ಲಿಯ ರೈತ ಹೋರಾಟಕ್ಕೆ 115 ದಿನಗಳಾಗಿವೆ. ಸರ್ಕಾರ ಈ ಆಂದೋಲನ ಮುರಿಯಲು ಪ್ರಯತ್ನಿಸಿತು. ಆದರೆ ಮೀನಾ ಮುತ್ತು ಗುಜ್ಜರ್ ರೈತರು ಒಂದೂಗೂಡಿ ರಾಜಸ್ಥಾನದಲ್ಲಿ ಹೋರಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹಿಂದೂ ಮುಸ್ಲಿಮರು ಒಂದುಗೂಡಿ ಹೋರಾಡುತ್ತಿದ್ದಾರೆ. ಅಂದರೆ ಈ ರೈತ ಹೋರಾಟ ದಿನೇ ದಿನೇ ಗಟ್ಟಿಗೊಳ್ಳುತ್ತಿದೆ ಮತ್ತು ದೇಶಕ್ಕೆ ವಿಸ್ತರಿಸುತ್ತಿದೆ ಎಂದರು.
32 ವರ್ಷಗಳಿಂದ ಎಂಎಸ್ಪಿಗಾಗಿ ಹೋರಾಡುತ್ತಿದ್ದೇವೆ. ರೈತರ ಆತ್ಮಹತ್ಯೆಗಳ ವಿರುದ್ಧ ನಾವು ಹೋರಾಡುತ್ತಿರುವಾಗ ಕೋವಿಡ್ ಕಾಲದಲ್ಲಿ ಕೇಂದ್ರ ಸರ್ಕಾರ ಈ ಕರಾಳ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. ಇದರ ವಿರುದ್ಧ ಕಳೆದ 8 ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದೇವೆ. ನಾವು ಇಡೀ ಪಂಜಾಬ್ ಬಂದ್ ಮಾಡಿದ್ದೇವೆ. ರೈಲು ಸೇವೆ ಸ್ಥಗಿತಗೊಳಿಸಿದ್ದೇವೆ. ರಿಲಯನ್ಸ್ ಮತ್ತು ಎಸ್ಸಾರ್ ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಿ ಹೋರಾಟ ಮಾಡಿದ್ದೇವೆ ಎಂದರು.
ಕರ್ನಾಟಕದಲ್ಲಿ ನೀವು ಐಕ್ಯ ಹೋರಾಟ ಮಾಡುತ್ತಿದ್ದೀರಿ. ಸಂಯುಕ್ತ ಹೋರಾಟ ನಡೆಸುತ್ತಿದ್ದೀರಿ. ನಾವು ಪಂಜಾಬ್ನಲ್ಲಿ 31 ಸಂಘಟನೆಗಳು ಒಂದುಗೂಡಿದ್ದರಿಂದ ದಿಲ್ಲಿಯ ಗಡಿಗಳಲ್ಲಿ ಗಟ್ಟಿ ಹೋರಾಟ ನಡೆಸಲು ಸಾಧ್ಯವಾಯಿತು ಎಂದ ಅವರು, ನಮ್ಮ ಹಾಗೆ ನೀವು ಸಹ ಒಂದುಗೂಡಿ ಹೋರಾಡುತ್ತೀರಿ ಎಂದು ನಂಬಿದ್ದೇವೆ. ಈ ಕಾರ್ಪೋರೇಟ್ಗಳ ವಿರುದ್ಧದ ಹೋರಾಟದಲ್ಲಿ ನೀವು ನಮ್ಮ ಜೊತೆ ಕೈ ಜೋಡಿಸುತ್ತೀರಿ ಅಲ್ಲವೇ ಎಂದು ಪಾಲ್ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ ಗಂಗಾಧರ್ ಅವರು ಮಾತನಾಡಿ, ಎಂಎಸ್ಪಿ ಇದೆ ಎಂದು ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ರೈತರ ಭೂಮಿ ಕಿತ್ತುಕೊಳ್ಳುವ ಕಾನೂನು ಮಾಡುತ್ತಿದ್ದಾರೆ. ಹಾಗಾಗಿ ಈ ಮಹಾ ಪಂಚಾಯತ್ ಮೂಲಕ ರೈತರ ಶಕ್ತಿ ಪ್ರದರ್ಶನ ಮಾಡುತ್ತಿದ್ದು, ಈ ಕಾನೂನುಗಳನ್ನು ವಾಪಸ್ ಪಡೆಯದಿದ್ದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದು ಸವಾಲು ಹಾಕಿದರು.
ಶಿವಮೊಗ್ಗ ಸಮಾಜವಾದಿ ಚಳವಳಿಯ ತವರೂರು. ರೈತ ಚಳವಳಿಯ ನೆಲೆ. ಕೇಂದ್ರದ ಈ ಕರಾಳ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮೊದಲ ರೈತ ಮಹಾಪಂಚಾಯತ್ ಗೂ ಇದು ಸಾಕ್ಷಿಯಾಗಿದೆ. ಮೋದಿ ಸರ್ಕಾರ ಹಿಂದೆ ಸರಿಯುವವರೆಗೂ, ಎಂಎಸ್ಪಿಗಾಗಿ ಕಾನೂನು ಜಾರಿಗೊಳಿಸುವವರೆಗೂ ನಾವು ವಿರಮಿಸುವುದಿಲ್ಲ ಎಂದರು.







