ಆರೆಸ್ಸೆಸ್ ಸರಕಾರ್ಯವಾಹ ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ
ಬೆಂಗಳೂರು, ಮಾ.20: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ನೂತನ ಸರಕಾರ್ಯವಾಹ ಆಗಿ ದತ್ತಾತ್ರೇಯ ಹೊಸಬಾಳೆ ಅವರು ಚುನಾಯಿತರಾಗಿದ್ದಾರೆ.
ಶನಿವಾರ ನಗರದ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ಆರೆಸ್ಸೆಸ್ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ (ಎಬಿಪಿಎಸ್) ಆಯ್ಕೆ ಕುರಿತು ಪ್ರಕಟಿಸಲಾಯಿತು.
ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಸಂಘದ ವಲಯದಲ್ಲಿ ಅವರನ್ನು ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಹಾಗೂ ಬೆಂ.ವಿ.ವಿದಿಂದ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1968ರಲ್ಲಿ ಅವರು ಆರೆಸ್ಸೆಸ್ ಪ್ರವೇಶಿಸಿದ್ದರು. 1972ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ, ಬಳಿಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ಕೆಲಸ ಮಾಡಿದ್ದಾರೆ. ಸಂಘಟನೆ, ಸಾಮಾಜಿಕ ಸಮರಸತೆ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟನಾಕಾರರು ಆಗಿರುವ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ.
2004ರಲ್ಲಿ ಮಾತೃ ಸಂಘಟನೆಯಾದ ಆರೆಸ್ಸೆಸ್ಗೆ ಮರಳಿದ ಅವರು, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಬಳಿಕ ಆರೆಸ್ಸೆಸ್ನ ಸಹ ಸರಕಾರ್ಯವಾಹರಾಗಿ ನೇಮಕ ಆಗಿದ್ದರು.







