ಕೊಲ್ಲೂರು ದೇವಸ್ಥಾನದ ವ್ಯವಸ್ಥೆ ಕುರಿತು ಧಾರ್ಮಿಕ ದತ್ತಿ ಇಲಾಖೆ ಸಭೆ

ಉಡುಪಿ, ಮಾ.22: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅವ್ಯವಸ್ಥೆಯನ್ನು ಸರಿಪಡಿಸಿ, ಎಲ್ಲಾ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ಮಾ.20ರಂದು ಕೊಲ್ಲೂರಿನಲ್ಲಿ ಸಭೆ ನಡೆಸಿದರು.
ಕೊಲ್ಲೂರು ದೇವಸ್ಥಾನದ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿರುವ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕರ್ನಾಟಕಕ್ಕೂ ಮಾ.20ರಂದು ನಡೆದ ಸಭೆಯಲ್ಲಿ ಮೊದಲ ಬಾರಿ ಭಾಗವಹಿಸಲು ಅವಕಾಶ ನೀಡಲಾಯಿತು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾರ್ವಜನಿಕ ಕುಂದುಕೊರತೆಗಳು, ದೇವಸ್ಥಾನದ ಸ್ಥಿರಾಸ್ತಿ ಮತ್ತು ಚರಾಸ್ತಿ ನಿರ್ವಹಣೆಯ ಬಗ್ಗೆ, ಯಾತ್ರಾರ್ಥಿಗಳ ಸೌಲಭ್ಯ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತ ಜಯಪ್ರಕಾಶ, ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಮಹೇಶ, ತಹಶೀಲ್ದಾರರು, ದೇವಸ್ಥಾನದ ಸಿಬ್ಬಂದಿ ವರ್ಗ, ಭೂಮಾಪನ ಇಲಾಖೆಯ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ ಮಧುಸೂದನ ಅಯಾರ, ದಿನೇಶ ಎಂ.ಪಿ, ಚಂದ್ರ ಮೊಗೇರ, ಶ್ರೀನಿವಾಸ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಜಯಕುಮಾರ, ಹಿಂದೂ ಜನಜಾಗೃತಿ ಸಮಿತಿಯ ವಿಶ್ವನಾಥ ಹಾಗೂ ದಿನೇಶ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಾಸಂಘದ ವತಿಯಿಂದ ದೇವಸ್ಥಾನದಲ್ಲಿ2005ರಿಂದ2019ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶ ಗಳನ್ನು ಉಪ ಆಯುಕ್ತರ ಜೊತೆ ಚರ್ಚಿಸಲಾಯಿತು. ಆ ವೇಳೆಯಲ್ಲಿ ಉಪ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ಅಲ್ಲದೇ ದೇವಸ್ಥಾನದ ಆಡಳಿತವನ್ನು ಪಾರದರ್ಶಕವಾಗಿರಿಸುವ ದೃಷ್ಟಿಯಿಂದ ಇಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯದ ಬಗ್ಗೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ವಿವರವನ್ನು ನೀಡಬೇಕೆಂದು ಉಪ ಆಯುಕ್ತರು ತಿಳಿಸಿದರು.
ಮಹಾಸಂಘವು ಆಕ್ಷೇಪಿಸಿದ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಕ್ರಮಗೊಳ್ಳುವಂತೆ ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸುವುದಾಗಿ ಎಂದು ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರ ಗುರುಪ್ರಸಾದ ಗೌಡ ತಿಳಿಸಿದರು.







