ಸುಮನಸಾ ಕೊಡವೂರು ‘ರಂಗಹಬ್ಬ’ ನಾಟಕೋತ್ಸವಕ್ಕೆ ಚಾಲನೆ

ಉಡುಪಿ, ಮಾ.22: ನಾಟಕಕ್ಕೆ ಅದರದ್ದೇ ಆದ ಗೌರವ ಇದೆ. ನಾಟಕವು ಮನ ಪರಿವರ್ತನೆ ಜೊತೆಗೆ ಸಮಾಜದಲ್ಲಿ ಒಳ್ಳೆತನ ಬಿಂಬಿಸುವಲ್ಲಿ ಸಾಕಷ್ಟು ಉತ್ತಮ ಕೊಡುಗೆಗಳನ್ನು ನೀಡುತ್ತಿದೆ ಎಂದು ಕಲಾ ಪೋಷಕ ಆನಂದ ಸಿ.ಕುಂದರ್ ಹೇಳಿದ್ದಾರೆ.
ಸುಮನಸಾ ಕೊಡವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ, ಪೇಜಾವರ ಅಧೋಕ್ಷಜ ಮಠ ಇವುಗಳ ಸಹಯೋಗದೊಂದಿಗೆ ಉಡುಪಿಯ ಭುಜಂಗ ಪಾರ್ಕಿನ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ರಂಗ ಹಬ್ಬ-9 ನಾಟಕೋತ್ಸ ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇ ಶಕ ಕುಮಾರ್ ಬೆಕ್ಕೇರಿ ಮಾತನಾಡಿ, ರಂಗಭೂಮಿಗೆ ಇಲಾಖೆಯಿಂದ ಸಾಕಷ್ಟು ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಅದರಲ್ಲೂ ನಾಟಕ ಕ್ಷೇತ್ರಕ್ಕೆ ವಿಶೇಷವಾದ ಮನ್ನಣೆ ನೀಡಲಾಗುತ್ತಿದೆ. ಅದೇ ರೀತಿ ರಂಗಾಯಣ, ನಾಟಕ ಅಕಾಡೆಮಿ ಮೂಲಕವೂ ಸರಕಾರ ನಾಟಗಳಿಗೆ ಬೆಂಬಲ ನೀಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಂಗ ನಿರ್ದೇಶಕ ಸುಕುಮಾರ್ ಮುದ್ರಾಡಿ ಅವರಿಗೆ ರಂಗ ಸಾಧಕ ಸನ್ಮಾನವನ್ನು ನೆರವೇರಿಸಲಾಯಿತು. ಉದ್ಯಮಿ ಆನಂದ್ ಪಿ.ಸುವರ್ಣ, ಸ್ಮರಣಿಕಾ ಸಮೂಹ ಸಂಸ್ಥೆಯ ಪ್ರವರ್ತಕ ದಿವಾಕರ್ ಸನಿಲ್, ನಾಗರಾಜ್ ಸುವರ್ಣ, ಅಂಬಲ ಪಾಡಿ ಗ್ರಾಪಂ ಸದಸ್ಯ ಲಕ್ಷ್ಮಣ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ಸ್ವಾಗತಿಸಿದರು. ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್ ಉಪಸ್ಥಿತರಿ ದ್ದರು. ಕಾರ್ಯದರ್ಶಿ ಜೀವನ್ ಕುಮಾರ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ಗೆಲಿಲಿಯೊ’, ಕನ್ನಡ ನಾಟಕ ಪ್ರದರ್ಶನಗೊಂಡಿತು.







