ಅಶ್ಲೀಲ ವೀಡಿಯೊ ಬಹಿರಂಗ ಪ್ರಕರಣ: ನಿಯಮ 68ರ ಅಡಿ ಚರ್ಚೆಗೆ ಅವಕಾಶ- ಬಸವರಾಜ ಹೊರಟ್ಟಿ

ಬೆಂಗಳೂರು, ಮಾ.22: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೊ ಪ್ರಕರಣವನ್ನು ಸೋಮವಾರ ಪರಿಷತ್ನಲ್ಲಿ ಕಾಂಗ್ರೆಸ್ ಪ್ರಸ್ತಾಪ ಮಾಡಿದೆ. ಪ್ರತಿಪಕ್ಷದ ನಿಲುವಳಿ ಸೂಚನೆಯನ್ನು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸಿ ಸಮಯ ನಿಗದಿಪಡಿಸಲಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ನ ಶೂನ್ಯ ವೇಳೆ ನಂತರ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಅಶ್ಲೀಲ ವೀಡಿಯೋ ವಿಚಾರದ ನಿಲುವಳಿ ಸೂಚನೆ ಮಂಡಿಸಿದರು. ಸರಕಾರದ ಆರು ಸಚಿವರು ಕೋರ್ಟ್ ಮೊರೆ ಹೋಗಿ ತಮ್ಮ ವಿರುದ್ಧ ಮಾನಹಾನಿಕರ ವಿಷಯ ಬಿತ್ತರಿಸಬಾರದೆಂಬ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ರಾಜ್ಯದ ಮರ್ಯಾದೆ ದೇಶ, ವಿದೇಶಗಳಲ್ಲಿ ಹರಾಜಾಗಿದೆ ಎಂದು ಆರೋಪಿಸಿದರು.
ಅಶ್ಲೀಲ ವೀಡಿಯೊ ಬಗ್ಗೆ ಯಾರು ಒಬ್ಬರೂ ದೂರು ನೀಡುವ ಮೊದಲೇ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ನೀಡಿದ ದೂರು, ಸಂತ್ರಸ್ತೆ ಪೋಷಕರು ನೀಡಿದ ದೂರಿನಂತೆ ತನಿಖೆ ನಡೆಯುತ್ತಿರುವುದು ಅನುಮಾನವಾಗಿದೆ. ಮಹಿಳಾ ಆಯೋಗ ಸಂತ್ರಸ್ತೆಗೆ ರಕ್ಷಣೆ ನೀಡುವಂತೆ ಸೂಚಿಸಿದ್ದರೂ ಈವರೆಗೂ ಸಂತ್ರಸ್ತೆ ಪತ್ತೆ ಮಾಡಿಲ್ಲ. ರಕ್ಷಣೆ ಕೊಡುವ ಕೆಲಸವಾಗಿಲ್ಲ. ಎಸ್ಐಟಿ ತನಿಖೆ ನೋಡಿದರೆ ವೀಡಿಯೊ ವಿಷಯದಲ್ಲಿ ತನಿಖೆ ಬೇರೆ ಹಾದಿಯಲ್ಲಿದೆ ಅನಿಸುತ್ತಿದೆ.
ಪ್ರಕರಣ ರಾಜ್ಯದ ಘನತೆಗೆ ಕುಂದು ತರುವಂತಿದೆ. ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು. ಪ್ರತಿಪಕ್ಷದ ನಿಲುವಳಿ ಸೂಚನೆಗೆ ಸಚಿವ ನಾರಾಯಣಗೌಡ ಆಕ್ಷೇಪಿಸಿದರು. ಈ ಹಿಂದೆ ಯಾರೂ ಕೋರ್ಟ್ಗೆ ಹೋಗಿಲ್ಲವೇ? ಎಂದು ಪ್ರತಿಪಕ್ಷವನ್ನು ಪ್ರಶ್ನಿಸಿದರು. ನಮ್ಮ ಗೌರವಕ್ಕೆ ಚ್ಯುತಿ ಬಂದಿದೆ. ಹೀಗಾಗಿ, ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಅಷ್ಟೇ ಎಂದು ಎಸ್.ಆರ್.ಪಾಟೀಲ್ ವಿರುದ್ಧ ಹರಿಹಾಯ್ದರಲ್ಲದೇ, ನ್ಯಾಯಾಲಯದ ಮೊರೆ ಹೋಗಿದ್ದನ್ನು ಸಮರ್ಥಿಸಿಕೊಂಡರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ ಕಾಂಗ್ರೆಸ್ನ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಪರಿವರ್ತನೆ ಮಾಡಿ ಸಮಯ ನಿಗದಿಪಡಿಸುವುದಾಗಿ ರೂಲಿಂಗ್ ನೀಡಿದರು. ಸಭಾಪತಿ ರೂಲಿಂಗ್ ನೀಡಿದ ನಂತರ ನಿರ್ಧಾರ ಪುನರ್ ಪರಿಶೀಲಿಸುವಂತೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು.
ಕಾಂಗ್ರೆಸ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ, ಅಶ್ಲೀಲ ವೀಡಿಯೊ ವಿಷಯ ಚರ್ಚೆಗೆ ಅವಕಾಶ ನೀಡುವುದಾಗಿ ರೂಲಿಂಗ್ ನೀಡಿದ್ದೀರಿ. ಆದರೆ, ಯಾವಾಗ ಅವಕಾಶ ಕೊಡುತ್ತೀರಿ ಎಂದು ಹೇಳಬೇಕು ಎಂದರು. ಪರಿಶೀಲಿಸಿ ಸಮಯ ನಿಗದಿಪಡಿಸುವ ಸಭಾಪತಿಗಳ ಭರವಸೆಗೆ ಒಪ್ಪದೆ ಈಗಲೇ ಸಮಯ ಹೇಳಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಏರಿದ ದನಿಯಲ್ಲೇ ಸಭಾಪತಿಗಳು ಅದು ನನ್ನ ಕೆಲಸ, ನಾನು ಸಮಯ ನಿಗದಿಪಡಿಸುತ್ತೇನೆ ಎಂದರು.







