ಮನ್ಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣ: ಪೊಲೀಸ್ ಅಧಿಕಾರಿ ಸಚಿನ್ ವಝೆ ಮುಖ್ಯ ಆರೋಪಿ
ಪ್ರಕರಣ ಭೇದಿಸಿರುವುದಾಗಿ ಘೋಷಿಸಿದ ಎನ್ಐಎ

ಮುಂಬೈ,ಮಾ.21: ವಾಹನಗಳ ಬಿಡಿಭಾಗಗಳ ವ್ಯಾಪಾರಿ ಮನ್ಸುಖ್ ಹಿರೇನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ತಾನು ಭೇದಿಸಿರುವುದಾಗಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳವು ತಿಳಿಸಿದೆ.
ಹಿರಾನಿ ಅವರು ಫೆಬ್ರವರಿ 25ರಂದು ರಿಲಯನ್ಸ್ ಉದ್ಯಮ ಸಮೂಹದ ವರಿಷ್ಠ ಮುಖೇಶ್ ಅಂಬಾನಿಯ ಅವರು ನಿವಾಸದ ಹೊರಗೆ ಪತ್ತೆಯಾದ ಸ್ಫೋಟಕ ತುಂಬಿದ ಕಾರಿನ ಮಾಲಕರಾಗಿದ್ದಾರೆ.
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆ ಅವರು ಪ್ರಕರಣದ ಪ್ರಮುಖ ಆರೋಪಿ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳವು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮಹಾರಾಷ್ಟ್ರ ಎಟಿಎಸ್ನ ಉಪ ಮಹಾನಿರೀಕ್ಷಕ ಶಿವ್ದೀಪ್ ಲಾಂಡೆ ತನ್ನ ಫೇಸ್ಬುಕ್ ಖಾತೆಯಲ್ಲೂ ಈ ವಿಷಯವನ್ನು ಪ್ರಕಟಿಸಿದ್ದಾರೆ.
‘‘ಕೋಲಾಹಲಕಾರಿ ಮನ್ಸುಖ್ ಹಿರಾನ್ ಕೊಲೆ ಪ್ರಕರಣವನ್ನು ಭೇದಿಸಲಾಗಿದೆ” ಎಂದು ಲಾಂಡೆ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಹಗಲು,ರಾತ್ರಿ ಶ್ರಮಿಸಿದ ನನ್ನ ಎಟಿಎಸ್ ಸಹದ್ಯೋಗಿಗಳಿಗೆ ನನ್ನ ಸಲ್ಯೂಟ್’’ ಎಂದವರು ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಆದಾಗ್ಯೂ ಹಿರಾನ್ ಶಂಕಿತ ಕೊಲೆ ಪ್ರಕರಣದ ಹಿಂದಿರುವ ಉದ್ದೇಶ ಹಾಗೂ ಹತ್ಯೆಯನ್ನು ಹೇಗೆ ನಡೆಸಲಾಯಿತು ಎಂಬ ಬಗ್ಗೆ ಯಾವುದೇ ವಿವರಗಳನ್ನು ನೀಡಲು ಎಟಿಎಸ್ ನಿರಾಕರಿಸಿ ಮುಖೇಶ್ ಅಂಬಾನಿ ನಿವಾಸದ ಸಮೀಪ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ ಮರುದಿನವೇ ಲಾಂಡೆ ಈ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ ಹಿರಾನ್ ಸಾವಿನ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂಬ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಎಟಿಎಸ್ ಶನಿವಾರ ವಶಕ್ಕೆ ತೆಗೆದುಕೊಂಡಿದೆ. ಆರೋಪಿಗಳನ್ನು ವಿನಾಯಕ್ ಶಿಂಧೆ ಹಾಗೂ ನರೇಶ್ ಧರೆ ಎಂದು ಗುರುತಿಸಲಾಗಿದೆ. ಲಖನ್ ಭಯ್ಯ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಶಿಂಧೆ ದೋಷಿಯಾಗಿದ್ದ. ಇನ್ನೋರ್ವ ಬಂಧಿತ ಬುಕ್ಕಿ ಎನ್ನಲಾಗಿದೆ. ಥಾಣೆಯ ನ್ಯಾಯಾಲಯವೊಂದು ಶಿಂಧೆ ಹಾಗೂ ಧರೆ ಅವರನ್ನು ಮಾರ್ಚ್ 30ರವರೆಗೆ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ.
ಹಿರಾನ್ ಅವರು ಮಾರ್ಚ್ 5ರಂದು ಮುಂಬೈ ಸಮೀಪದ ಕಡಲ ತೀರದ ಬಳಿ ಸಾವನ್ನಪ್ಪಿ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಫೋಟಕ ಪತ್ತೆ ಪತ್ತೆ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದ ಸಚಿನ್ ವಾಝೆ ಅವರು ಅಂಬಾನಿ ನಿವಾಸದ ಸಮೀಪ ಪತ್ತೆಯಾದ ಕಾರನ್ನು ನಾಲ್ಕು ತಿಂಗಳ ಹಿಂದೆ ಬಳಸಿಕೊಂಡಿದ್ದರು ಹಾಗೂ ಫೆಬ್ರವರಿ 5ರಂದು ಅದನ್ನು ಹಿಂತಿರುಗಿಸಿದ್ದರು. ತನ್ನ ಪತಿಯ ಸಾವಿನಲ್ಲಿ ವಝೆ ಅವರ ಪಾತ್ರವಿರುವುದಾಗಿಯೂ ಹಿರಾನ್ ಅವರ ಪತ್ನಿ ಆಪಾದಿಸಿದ್ದಾರೆ.
ಈ ವಾರದ ಆರಂಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಸ್ಫೋಟಕವನ್ನು ಇರಿಸಿದ ಕಾರನ್ನು ಅಂಬಾನಿ ನಿವಾಸದ ಸಮೀಪ ಪಾರ್ಕ್ ಮಾಡಿದ ಬಳಿಕ ಚಲಾಯಿಸಿಕೊಂಡು ಹೋಗಿದ್ದ ಕಪ್ಪು ಮರ್ಸಿಡಿಸ್ ಬೆಂಝ್ ಕಾರು ಹಾಗೂ 5 ಲಕ್ಷ ರೂ. ನಗದು ಹಾಗೂ ನೋಟು ಏಣಿಕೆ ಯಂತ್ರವನ್ನು ವಶಪಡಿಸಿಕೊಂಡಿತ್ತು.







