ಮಾ.24ರಂದು ರಾತ್ರಿ ತುಂಬೆಗೆ ತಲುಪಲಿರುವ ಪ್ರೊ. ಅಬೂಬಕರ್ ಮೃತದೇಹ

ಬಂಟ್ವಾಳ, ಮಾ.23: ಶಿಕ್ಷಣ ತಜ್ಞ, ಯುಎಇ ರಾಸ್ ಅಲ್ ಖೈಮಾ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ನ ಪ್ರಾಂಶುಪಾಲ ಪ್ರೊ. ಎಂ. ಅಬೂಬಕರ್ ತುಂಬೆ ಅವರ ಅಂತ್ಯ ಸಂಸ್ಕಾರ ತುಂಬೆ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನಡೆಯಲಿದೆ.
ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಮಾ.24ರಂದು ಭಾರತದ ಕಾಲಮಾನ ಸಂಜೆ 7:30ರ ಸುಮಾರಿಗೆ ಯುಎಇಯಿಂದ ವಿಮಾನದಲ್ಲಿ ಮೃತದೇಹವನ್ನು ತರಲಿದ್ದು ರಾತ್ರಿ 11:30ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ. ತುಂಬೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂದ ಮೂಲ ತಿಳಿಸಿದೆ.
ಸಂತಾಪ: ಶಿಕ್ಷಣ ತಜ್ಞ, ಯುಎಇ ರಾಸ್ ಅಲ್ ಖೈಮಾ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ನ ಪ್ರಾಂಶುಪಾಲ ಪ್ರೊ. ಎಂ. ಅಬೂಬಕರ್ ತುಂಬೆ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ.
ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಅಬ್ದುಲ್ ಸಲಾಂ, ಕಾಲೇಜಿನ ಸಂಚಾಲಕ ಬಸ್ತಿ ವಾಮನ ಶೆಣೈ, ತುಂಬೆ ಬಿ.ಎ. ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, ನಿರ್ದೇಶಕ ಕಬೀರ್ ಮಾಸ್ಟರ್ ಮತ್ತು ಶಿಕ್ಷಕ ವರ್ಗ, ತುಂಬೆ ಜುಮಾ ಮಸೀದಿ ಅಧ್ಯಕ್ಷ ಇಮ್ತಿಯಾಝ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಮೂಸಬ್ಬ, ಪಿ.ಎಫ್.ಐ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಪಾಣೆಮಂಗಳೂರು, ಪಿ.ಎಫ್.ಐ. ಬಂಟ್ವಾಳ ಅಧ್ಯಕ್ಷ ಸಲೀಂ ಫರಂಗಿಪೇಟೆ ಸಂತಾಪ ಸೂಚಿಸಿದ್ದಾರೆ.







