ಮುಸ್ಲಿಮರ ಮೀಸಲಾತಿ ಶೇ.8ಕ್ಕೇರಿಕೆಯಾಗಲಿ : ಬಿ.ಎಂ. ಹನೀಫ್
‘ಮುಸ್ಲಿಂ ಮೀಸಲಾತಿ ಪ್ರಾಯೋಗಿಕವೇ?’ ವಿಚಾರ ಸಂಕಿರಣ

ಮಂಗಳೂರು, ಮಾ.23: ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ.16 ಇದ್ದು, ಸದ್ಯ ಶೇ.4ರಷ್ಟು ಮೀಸಲಾತಿ ಪಡೆಯಲಾಗುತ್ತಿದೆ. ಜನಸಂಖ್ಯೆಗೆ ಹೋಲಿಸಿದರೆ ಇದು ತೀರಾ ಕನಿಷ್ಠ ಮಟ್ಟದ್ದಾಗಿದೆ. ಮೀಸಲಾತಿಯನ್ನು ಶೇ.8ಕ್ಕೇರಿಕೆ ಮಾಡಬೇಕು ಎಂದು ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ. ಹನೀಫ್ ಪ್ರತಿಪಾದಿಸಿದ್ದಾರೆ.
ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ನ ಮಂಗಳೂರು ತಾಲೂಕು ಸಮಿತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾದ ‘ಮುಸ್ಲಿಂ ಮೀಸಲಾತಿ ಪ್ರಾಯೋಗಿಕವೇ?’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ‘ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ’ ನಡೆಸಿತ್ತು. ಈ ಸಮೀಕ್ಷೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಕುರಿತು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಔದ್ಯೋಗಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸುವ ಮಹತ್ವದ ಕೆಲಸ ಮಾಡಿತ್ತು. ಈ ಸಮೀಕ್ಷೆಯ ಪ್ರಕಾರ ಮುಸ್ಲಿಮರಿಗೆ ಶೇ.8ರಷ್ಟು ಮೀಸಲಾತಿ ಕಲ್ಪಿಸಿದರೆ ತಪ್ಪೇನೂ ಇಲ್ಲವೆಂದು ಅವರು ಹೇಳಿದರು.
ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಅಂಕಿ- ಅಂಶಗಳು ಹೇಳುವಂತೆ ರಾಜ್ಯದಲ್ಲಿ ಎಸ್ಸಿ-ಶೇ.19.05, ಮುಸ್ಲಿಂ-ಶೇ.16, ಒಬಿಸಿ- ಶೇ.16ರಷ್ಟು ಜನಸಂಖ್ಯೆ ಹೊಂದಿದೆ. ಇಲ್ಲಿ ಒಬಿಸಿಯಷ್ಟೇ ಜನಸಂಖ್ಯೆಯನ್ನು ಮುಸ್ಲಿಂ ಸಮುದಾಯ ಹೊಂದಿದ್ದರೂ ಮೀಸಲಾತಿಯಲ್ಲಿ ಏಕೆ ನಿರ್ಲಕ್ಷ ವಹಿಸಲಾಗಿದೆ? ರಾಜ್ಯ ಸರಕಾರವು ಕೂಡಲೇ ‘ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ’ಯನ್ನು ಕೂಡಲೇ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಬ್ರಿಟಿಷರ ಕಾಲದಲ್ಲೂ ಮೀಸಲಾತಿಯ ಪ್ರಸ್ತಾಪವಿದೆ. ರಾಜ್ಯದಲ್ಲೂ ಲೆಸ್ಲಿ ಮಿಲ್ಲರ್ ಆಯೋಗ, ನಾಗನಗೌಡ ಆಯೋಗ, ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗಗಳನ್ನು ಕಾಲಕಾಲಕ್ಕೆ ರಚಿಸಿ ಸಮೀಕ್ಷೆ ನಡೆಸಿ, ಅನುಷ್ಠಾನಗೊಳಿಸಲಾಯಿತು. ಇವೆಲ್ಲ ಆಯೋಗದ ವರದಿಯಲ್ಲೂ ಮುಸ್ಲಿಂ ಸಮುದಾಯವು ತೀರಾ ಹಿಂದುಳಿದ ವರ್ಗವೆಂದು ಉಲ್ಲೇಖಗೊಂಡಿದೆ. ಆದಾಗ್ಯೂ, ಸಮರ್ಪಕವಾದ ಮೀಸಲಾತಿ ಇಂದಿಗೂ ಪಡೆಯಲಾಗದುದು ದುರದೃಷ್ಟ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದಲಿತರಿಗಿಂತ ಮುಸ್ಲಿಮರು ತೀರಾ ಹಿಂದುಳಿದಿ ದ್ದಾರೆಂದು ನ್ಯಾ.ಸಾಚಾರ್ ವರದಿ ಪ್ರತಿಪಾದಿಸಿದೆ. ಶಾಸನಬದ್ಧ ಆಯೋಗಗಳ ವರದಿಯನ್ನು ಜಾರಿಗೊಳಿಸುವುದು ಸರಕಾರದ ಕರ್ತವ್ಯ. ಮೀಸಲಾತಿ ಕಲ್ಪಿಸುವುದು, ಹಿಂದುಳಿದ ಮುಸ್ಲಿಮರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಸಹಿತ ಹಲವು ವಿಷಯಗಳು ‘ಮುಸ್ಲಿಂ ಮೀಸಲಾತಿ ಹೋರಾಟದ ರೂಪುರೇಷೆಗಳಲ್ಲಿ ಕಾರ್ಯಸೂಚಿಯಾಗಬೇಕು. ಇದೆಲ್ಲವನ್ನು ಸಮುದಾಯ ಅರ್ಥೈಸಿ ಕೊಳ್ಳಬೇಕು. ನಂತರವೇ ಹೋರಾಟಕ್ಕೆ ಮುಂದಡಿ ಇಡಬೇಕು ಎಂದು ಅವರು ಮನವಿ ಮಾಡಿದರು.
ವಿಚಾರ ಸಂಕಿರಣವನ್ನು ರಾಜ್ಯ ವಕ್ಫ್ ಬೋರ್ಡ್ನ ಸದಸ್ಯ ಮೌಲಾನ ಎನ್.ಕೆ.ಎಂ. ಶಾಫಿ ಸಾದಿ ಕಾರ್ಯಕ್ರಮ ಉದ್ಘಾಟಿಸಿದರು. ‘ದಲಿತ್ ವಾಯ್ಸಾ’ ಸಂಪಾದಕ ವಿ.ಟಿ. ರಾಜಶೇಖರ್, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ. ಬಾವ ಮಾತನಾಡಿದರು.
ಮುಸ್ಲಿಂ ಜಮಾಅತ್ನ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಅಬ್ದುಲ್ ನಸೀರ್ ಲಕ್ಕೀ ಸ್ಟಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಮುಸ್ಲಿಂ ಜಮಾಅತ್ನ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಹಾಜಿ, ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು, ಬಿ.ಎ. ನಝೀರ್, ಮನಪಾ ಸದಸ್ಯ ಅಬ್ದುಲ್ ಲತೀಫ್, ನಝೀರ್ ಬಜಾಲ್, ಹಾರಿಸ್, ಫಾರೂಕ್ ಕಾಟಿಪಳ್ಳ, ಇಕ್ಬಾಲ್ ಅಹ್ಮದ್, ಕಿನ್ಯ ಇಸ್ಮಾಯಿಲ್ ಸಅದಿ, ಅಬ್ದುರ್ರಹ್ಮಾನ್ ಪ್ರಿಂಟೆಕ್, ಇಲ್ಯಾಸ್ ಅಂಗರಗುಂಡಿ ಹಾಗೂ ವಿವಿಧ ಧಾರ್ಮಿಕ ಸಾಮಾಜಿಕ ಮುಂದಾಳುಗಳು ಉಪಸ್ಥಿತರಿದ್ದರು.
ಸಯೀದುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
‘ತೀರಾ ಹಿಂದುಳಿದ ಮುಸ್ಲಿಮರಿಗೆ ನಿಗಮ ಸ್ಥಾಪಿಸಿ’
ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಮರ ಸ್ಥಿತಿಗತಿಯಂತೂ ತೀರಾ ಶೋಚನೀಯ. ಮುಸ್ಲಿಮರಲ್ಲೇ ಹಲವು ಪಂಗಡಗಳು ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಇನ್ನೂ ತೊಡಗಿವೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿವೆ. ಮುಸ್ಲಿಂ ಸಮುದಾಯದಲ್ಲಿನ ತೀರಾ ಹಿಂದುಳಿದ 17 ವೃತ್ತಿ ಆಧಾರಿತ ವರ್ಗಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ, 500 ಕೋಟಿ ರೂ.ನ್ನು ತೆಗೆದಿರಿಸಬೇಕು ಎಂದು ಬಿ.ಎಂ. ಹನೀಫ್ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.









