ಕೊರತೆ ಮಧ್ಯೆಯೇ ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಶ್ರಮಿಸುತ್ತೇವೆ: ಮುಖ್ಯಮಂತ್ರಿ ಯಡಿಯೂರಪ್ಪ
ಗದ್ದಲದ ಮಧ್ಯೆ ‘ಧನ ವಿನಿಯೋಗ ವಿಧೇಯಕ' ಅಂಗೀಕಾರ

►ಡಾ.ಅಂಬೇಡ್ಕರ್, ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ತಲಾ 150 ಕೋಟಿ ರೂ.ಹೆಚ್ಚುವರಿ ಅನುದಾನ
ಬೆಂಗಳೂರು, ಮಾ. 24: ‘ಕೋವಿಡ್ ಸಂಕಷ್ಟದಿಂದ ರಾಜ್ಯ ಮಾತ್ರವಲ್ಲ ವಿಶ್ವದ ಆರ್ಥಿಕತೆಯೇ ಕಡಿಮೆಯಾಗಿದೆ. ನಮ್ಮ ನೆರೆಯ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರಕ್ಕೆ ಹೋಲಿಸಿದರೆ ಸಂಕಷ್ಟದ ವರ್ಷದಲ್ಲಿಯೂ ನಮ್ಮ ಸರಕಾರ ವಿತ್ತೀಯ ಮತ್ತು ರಾಜಸ್ವ ಕೊರತೆ ಇದ್ದರೂ ಮುಂದಿನ ವರ್ಷದಲ್ಲಿ ರಾಜಸ್ವ ಸಂಗ್ರಹಣೆ ಸೃಜಿಸುವ ಮೂಲಕ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲು ಶ್ರಮಿಸಲಿದೆ' ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲ-ಕೋಲಾಹಲದ ಮಧ್ಯೆಯೆ ಆಯವ್ಯಯದ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಅವರು, ಕೊರೋನ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಕೊರತೆ ಬಜೆಟ್ ಮಂಡಿಸಿವೆ. 2020-21ನೆ ಸಾಲಿನಲ್ಲಿ ರಾಜ್ಯದ ಆರ್ಥಿಕ ಕೊರತೆ 46,072 ಕೋಟಿ ರೂ.ಗಳಾಗಿದ್ದು, 2021-22ನೆ ಸಾಲಿನಲ್ಲಿ ಈ ಕೊರತೆ ಒಟ್ಟು 59,240 ಕೋಟಿ ರೂ.ಗಳಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಜಿಎಸ್ಡಿಪಿಯ ಶೇ.26.9ರಷ್ಟು ಎಂದು ಅಂದಾಜಿಸಲಾಗಿದೆ. ಆದರೆ, ಕೊರೋನ ಸೋಂಕು ಕಡಿಮೆಯಾಗಿ ಆರ್ಥಿಕತೆಯಲ್ಲಿ ಬೆಳವಣಿಗೆ ಉಂಟಾದರೆ ಸರಕಾರದ ರಾಜಸ್ವವು ವೃದ್ಧಿಯಾಗಿ ಸಾಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರಿಂದ ಒಟ್ಟು ಹೊಣೆಗಾರಿಕೆಯೂ ತಗ್ಗಲಿದೆ. ಆದುದರಿಂದ ಆರ್ಥಿಕತೆಯನ್ನು ಉತ್ತೇಜಿಸಲು ಸರಕಾರ ಪ್ರಯತ್ನ ನಡೆಸಿದೆ ಎಂದರು.
ಕೇಂದ್ರದ ತೆರಿಗೆ ಸಂಗ್ರಹ ಕಡಿಮೆ: 2020-21ನೆ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 15ನೆ ಹಣಕಾಸು ಆಯೋಗ ನೀಡಿದ್ದ ಶೇ.3.64ರ
ಹಂಚಿಕೆಯನ್ನೇ 2021-26ನೆ ಸಾಲಿಗೂ ಮುಂದುವರಿಸಲಾಗಿದೆ. 14ನೆ ಹಣಕಾಸು ಆಯೋಗವು ರಾಜ್ಯಕ್ಕೆ ನಿಗದಿಪಡಿಸಿದ್ದ ಶೇ.4.71 ಹಂಚಿಕೆಗೆ ಹೋಲಿಸಿದರೆ 15ನೆ ಹಣಕಾಸು ಮಾಡಿರುವ ಹಂಚಿಕೆಯಿಂದ ರಾಜ್ಯಕ್ಕೆ ನಷ್ಟವಾಗಿರುತ್ತದೆ.
15ನೆ ಹಣಕಾಸು ಆಯೋಗವು ಹಿಂದುಳಿದ ರಾಜ್ಯಗಳ ಅಭಿವೃದ್ಧಿಗಾಗಿ ಒತ್ತು ನೀಡಿದೆ ಮತ್ತು ಕೇಂದ್ರದ ತೆರಿಗೆ ಸಂಗ್ರಹವು ಕಡಿಮೆಯಾಗಿದೆ. ಅಲ್ಲದೆ, ಕರ್ನಾಟಕ ರಾಜ್ಯದ ತಲಾ ಆದಾಯವು ರಾಷ್ಟ್ರದ ದೊಡ್ಡ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದ ಪಾಲಿನಲ್ಲಿ ಇಳಿಕೆ ಕಂಡಿದೆ ಎಂದು ಯಡಿಯೂರಪ್ಪ ಇದೇ ವೇಳೆ ಸ್ಪಷ್ಟಣೆ ನೀಡಿದರು.
ಸುಧಾರಣೆಗೆ ಕ್ರಮ: ಚಾಲ್ತಿಯಲ್ಲಿಲ್ಲದ 11 ವೈಯಕ್ತಿಕ ಠೇವಣಿ(ಪಿ.ಡಿ.ಖಾತೆ) ಖಾತೆಗಳನ್ನು ರದ್ದು ಮಾಡಲಾಗಿದ್ದು, ಮುಂದಿನ ದಿನದಲ್ಲಿ ಇಂತಹ ಇನ್ನಷ್ಟು ಚಾಲ್ತಿಯಲ್ಲಿರದ ಪಿ.ಡಿ. ಖಾತೆಗಳನ್ನು ಗುರುತಿಸಿ ರದ್ದುಪಡಿಸಲಾಗುವುದು ಎಂದ ಯಡಿಯೂರಪ್ಪ, ಪ್ರಕೃತಿ ವಿಕೋಪ ಪರಿಹಾರ ಸೇರಿದಂತೆ ಮುಂತಾದ ತುರ್ತು ಕಾರ್ಯಗಳಿಗೆ ಪಾವತಿ ಮಾಡಲು ತೊಂದರೆಯಾಗುವುದನ್ನು ಮನಗಂಡು ಆರ್ಥಿಕ ಇಲಾಖೆಯು ಪ್ರತಿವರ್ಷ ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾಧಿಕಾರಿಗಳ ಪಿ.ಡಿ.ಖಾತೆಯನ್ನು ತೆರೆದಿದೆ.
ಆದರೆ, ಕೆಲವು ಪಿ.ಡಿ ಖಾತೆಗಳು ಚಾಲ್ತಿಯಲ್ಲಿಲ್ಲ. ಮೂರು ವರ್ಷಗಿಂತ ಹೆಚ್ಚು ಚಾಲ್ತಿಯಲ್ಲಿಲ್ಲದಿರುವ ಈ ಖಾತೆಗಳನ್ನು ಪರಿಶೀಲನೆ ನಡೆಸಿದ ವೇಳೆ ಪತ್ತೆಯಾದ 11 ಪಿ.ಡಿ. ಖಾತೆಗಳನ್ನು ರದ್ದು ಮಾಡಲಾಗಿದೆ. ಮುಂದಿನ ದಿನದಲ್ಲಿ ಮತ್ತಷ್ಟು ಚಾಲ್ತಿಯಲ್ಲಿರದ ಪಿ.ಡಿ. ಖಾತೆಗಳನ್ನು ಗುರುತಿಸಿ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ನಿರ್ವಹಿಸುವ ಪಿ.ಡಿ ಖಾತೆಯಲ್ಲಿ 3,200 ಕೋಟಿ ರೂ.ಗಳಿದ್ದು, ಶಾಸಕರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಮೊತ್ತವು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಪಿ.ಡಿ.ಖಾತೆಗಳಲ್ಲಿ 1,100 ಕೋಟಿ ರೂ.ಗಳಿದೆ. ವಿಪತ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 1 ಸಾವಿರ ಕೋಟಿ ರೂ.ಗಳಿದೆ ಎಂದು ಯಡಿಯೂರಪ್ಪ ಅಂಕಿ-ಸಂಖ್ಯೆಗಳನ್ನು ಸದನಕ್ಕೆ ನೀಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರೂ.ಹೆಚ್ಚುವರಿ: ಎಸ್ಸಿಪಿ-ಟಿಎಸ್ಪಿ ಯೋಜನೆಗಳಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಒಟ್ಟು 26,005 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದು ಕಾಯ್ದೆ ನಿಗದಿಪಡಿಸಿದ ಶೇ.24.1ರ ಎದುರಾಗಿ ಶೇ.24.23ರಷ್ಟಾಗಿದೆ. ಆದರೂ, ಈ ಮೊತ್ತ ಕಳೆದ ಸಾಲಿನ ಮಟ್ಟಕ್ಕೆ ತರಲು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ತಲಾ 150 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಯಡಿಯೂರಪ್ಪ ಪ್ರಕಟಿಸಿದರು.
ಆ ಬಳಿಕ ರಾಜ್ಯದ ಸಂಚಿತ ನಿಧಿಯಿಂದ 2021-22ನೆ ಸಾಲಿನ ಹಣಕಾಸು ವರ್ಷಕ್ಕಾಗಿ 2,52,39,197 ರೂ.ಗಳಿಗೆ ಮೀರದಷ್ಟು ಮೊಬಲಗನ್ನು ಸಂದಾಯ ಮಾಡಲು ಅವಕಾಶ ಕಲ್ಪಿಸುವ ನೀಡುವ ‘ಕರ್ನಾಟಕ ಧನ ವಿನಿಯೋಗ ವಿಧೇಯಕ-2021, ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ 2021 ಹಾಗೂ 2021-22ನೆ ಸಾಲಿನ ಪೂರಕ ಅಂದಾಜುಗಳು-ಮೂರನೇ ಹಾಗೂ ಅಂತಿಮ ಕಂತಿನ ಬೇಡಿಕೆಗಳ ಪ್ರಸ್ತಾವಕ್ಕೆ ವಿಧಾನಸಭೆ ಧ್ವನಿಮತದ ಮೂಲಕ ಒಪ್ಪಿಗೆ ನೀಡಲಾಯಿತು.
‘ಒಂದು ವರ್ಷದ ಅವಧಿಯ ಕೋವಿಡ್ ಹಾವಳಿಯಿಂದ ಸ್ಥಗಿತಗೊಂಡಿದ್ದ ಆರ್ಥಿಕತೆ ಚೇತರಿಸಿಕೊಳ್ಳುವ ಸಂದರ್ಭದಲ್ಲೇ ಹೊಸ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ನಮಗೆದುರಾಗಿದೆ. ಇದನ್ನು ನಾವು ಧೈರ್ಯವಾಗಿ ಎದುರಿಸುತ್ತೇವೆ. ರಾಜ್ಯದ ಜನತೆ ಸರಕಾರದೊಂದಿಗೆ ಸಹಕರಿಸಿ, ಅಗತ್ಯ ಮುನ್ನಚ್ಚರಿಕೆ ವಹಿಸಬೇಕು, ಕೋವಿಡ್ ಮಾರ್ಗಸೂಚಿ ಪಾಲಿಸಬೇಕು'
-ಯಡಿಯೂರಪ್ಪ, ಮುಖ್ಯಮಂತ್ರಿ







