ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಧರಣಿಯ ನಡುವೆಯೇ ಪೂರಕ ಅಂದಾಜು ಮಂಡನೆ; ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು, ಮಾ.24: ವಿಧಾನ ಪರಿಷತ್ನಲ್ಲಿ ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಧರಣಿ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21ನೆ ಸಾಲಿನ ಪೂರಕ ಅಂದಾಜುಗಳ(ಮೂರನೆ ಮತ್ತು ಅಂತಿಕ ಕಂತು)ನ್ನು ಮಂಡಿಸಿದ್ದಾರೆ.
ವಿಧಾನ ಪರಿಷತ್ ವಿತ್ತೀಯ ಕಾರ್ಯ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಧನವಿನಿಯೋಗ ವಿಧೇಯಕವನ್ನು ಮಂಡಿಸಿದರು.
ವಿಧೇಯಕದ ಮೇಲೆ ಮಾತನಾಡಿದ ಮುಖ್ಯಮಂತ್ರಿಗಳು, ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ಸದಸ್ಯರು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಪಕ್ಷ ಸದಸ್ಯರು ಬಾವಿಯಲ್ಲಿರುವಾಗ ಹೆಚ್ಚಿನ ಮಾಹಿತಿ ನೀಡಲು ಹೋಗಲ್ಲ ಎಂದು ಬಜೆಟ್ನ ಭಾಷಣದ ಪ್ರತಿಯನ್ನು ಮಂಡಿಸಿದರು. ನಂತರ ಧ್ವನಿಮತದ ಮೂಲಕ ಧನವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಸಾರ್ವಜನಿಕ ಸಂಘಗಳ ಪಾರದರ್ಶಕ ತಿದ್ದುಪಡಿ ವಿಧೇಯಕ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ ಅಂಗೀಕಾರ ನೀಡಿತು.
ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ, ಕರ್ನಾಟಕ ಜಲಸಾರಿಗೆ ಮಂಡಳಿ ವಿಧೇಯಕಕ್ಕೆ ಯಾವುದೇ ಚರ್ಚೆಯಿಲ್ಲದೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ಸಿಕ್ಕಿತು.
ಜೆಡಿಎಸ್ ಸಭಾತ್ಯಾಗ: ಸದನದಲ್ಲಿ ಕಾಂಗ್ರೆಸ್ ಧರಣಿ ಹಾಗೂ ಬಿಜೆಪಿಯ ನಿಲುವಿಗೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಆಕ್ಷೇಪ ವ್ಯಕ್ತಪಡಿಸಿದರು, ಶಿಕ್ಷಕರ ಸಮಸ್ಯೆ ಸೇರಿ ಜ್ವಲಂತ ಸಮಸ್ಯೆ ಚರ್ಚೆಗೆ ಅವಕಾಶ ಇಲ್ಲದಂತಾಗಿದೆ, ಬಜೆಟ್ ಮೇಲೂ ಮಾತನಾಡಲಾಗಿಲ್ಲ, ಕಾಂಗ್ರೆಸ್ ಧರಣಿ, ಆಡಳಿತ ಪಕ್ಷದ ಧೋರಣೆ ಖಂಡಿಸಿ ಸಭಾತ್ಯಾಗ ಮಾಡುವ ಘೋಷಣೆ ಮಾಡಿ ಸದನದಿಂದ ಹೊರನಡೆದರು. ಜೆಡಿಎಸ್ನ ಎಲ್ಲ ಸದಸ್ಯರು ಸಭಾತ್ಯಾಗ ಮಾಡಿದರು.







