ಮಂಗಳೂರು : ಡಾ. ಎ.ಕೆ. ಖಾಸಿಮ್ ರಿಗೆ ಸಂತಾಪ ಸಭೆ

ಮಂಗಳೂರು, ಮಾ.24: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸದಸ್ಯ ಡಾ. ಎ.ಕೆ.ಖಾಸಿಮ್ ಅವರಿಗೆ ನಗರದ ವಾಸ್ಲೇನ್ನಲ್ಲಿರುವ ಇಹ್ಸಾನ್ ಮಸೀದಿ ಬಳಿಯ ಎಚ್ಐಎಫ್ ಆಡಿಟೋರಿಯಂನಲ್ಲಿ ಬುಧವಾರ ಸಾರ್ವಜನಿಕ ಸಂತಾಪ ಸಭೆ ನಡೆಯಿತು.
ಎಂ.ಫ್ರೆಂಡ್ಸ್ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಎಂ.ಫ್ರೆಂಡ್ಸ್ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ‘ನಮ್ಮನ್ನಗಲಿದ ಖಾಸಿಮ್ ಅವರು ವಿದ್ಯಾರ್ಥಿಯಾಗಿರುವಾಗಲೇ ನಾಯಕತ್ವದ ಗುಣ ಬೆಳೆಸಿಕೊಂಡಿದ್ದರು. ಬಡವರು ಮತ್ತು ಅಶಕ್ತರಿಗಾಗಿ ಮನ ಮಿಡಿಯುತ್ತಿದ್ದರು. ಸಾಮಾಜಿಕ ಕಳಕಳಿ ಅವರಿಗೆ ಇತ್ತು. ಸಮಾಜಕ್ಕಾಗಿ ಏನಾದರೊಂದು ಮಾಡಬೇಕು ಎಂಬ ತುಡಿತವಿತ್ತು. ಮುಗ್ಧ ಮನಸ್ಸಿನ ಅವರು ಸದಾ ಹಸನ್ಮುಖಿಯಾಗಿದ್ದರು’ ಎಂದರು.
ಡಾ.ಎ.ಕೆ.ಖಾಸಿಮ್ ಅವರ ಸ್ನೇಹಿತ ಡಾ.ಗಿರೀಶ್ ಮಾತನಾಡಿ ‘ನನ್ನ ಮತ್ತು ಖಾಸಿಮ್ರ ಸ್ನೇಹ 30 ವರ್ಷದ್ದು. ಸ್ನೇಹಜೀವಿಯಾಗಿದ್ದ ಅವರು ತನಗಾಗಿ ಏನನ್ನೂ ಯಾವತ್ತೂ ಕೇಳಿದವರಲ್ಲ. ಪರರಿಗಾಗಿ ಯಾವುದೇ ಸಹಾಯ ಕೇಳಲು ಹಿಂಜರಿದವರೂ ಅಲ್ಲ. ಅವರ ವ್ಯಕ್ತಿತ್ವ ನಮಗೆ ಸದಾ ಪಾಠವಾಗಿದೆ’ ಎಂದರು.
ಬದ್ರಿಯಾ ಕಾಲೇಜಿನ ಪಿಯು ವಿಭಾಗದ ಪ್ರಾಂಶುಪಾಲ ಯೂಸುಫ್ ಮಾತನಾಡಿ ‘ಖಾಸಿಮ್ ಯಾವುದೇ ನೆರವು ನೀಡುವಾಗ ಜಾತಿ, ಮತ ನೋಡುತ್ತಿರಲಿಲ್ಲ. ಎಲ್ಲಾ ಭಾಷೆಗಳಲ್ಲೂ ಹಿಡಿತ ಸಾಧಿಸಿದ್ದ ಅವರು ಕುಟುಂಬದ ಸದಸ್ಯರ ಜೊತೆಯೂ ಸ್ನೇಹಮಯ ವ್ಯಕ್ತಿತ್ವ ರೂಪಿಸಿದ್ದರು’ ಎಂದರು.
ಹಿದಾಯ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಖಾಸಿಮ್ ಅಹ್ಮದ್ ಮಾತನಾಡಿ ‘ಹೃದಯ ಶ್ರೀಮಂತಿಕೆಗೆ ಖಾಸಿಮ್ ಸಾಕ್ಷಿಯಾಗಿದ್ದರು. ಸಮಾಜ, ಸಮುದಾಯದ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕನಸಿತ್ತು. ಚಾರಿಟಿ ಸೇವೆಯೊಂದಿಗೆ ಎಲ್ಲಾ ಸೇವಕರ ಜೊತೆಯೂ ಅವರು ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದರು.
ಐಎಸ್ಎಫ್ ಕಾರ್ಯಕರ್ತ ಶಾಕಿರ್ ಹಕ್ ನೆಲ್ಯಾಡಿ ಮಾತನಾಡಿ ‘ಖಾಸಿಮ್ ಅವರಲ್ಲಿ ವೈದ್ಯನೆಂಬ ಹಮ್ಮು ಇರಲಿಲ್ಲ. ಕೊರೋನ ಸಂದರ್ಭ ಮಕ್ಕಾದಲ್ಲಿದ್ದ ಅನೇಕರು ತವರೂರಿಗೆ ಮರಳಿದ್ದರೆ ಖಾಸಿಮ್ ಅವರು ಅಲ್ಲಿದ್ದುಕೊಂಡು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಮ್ಮೆಲ್ಲರ ಹೃದಯ ಗೆದ್ದಿದ್ದರು. ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು’ ಎಂದರು.
ರಾಜ್ಯ ಆಹಾರ ಆಯೋಗದ ಮಾಜಿ ಸದಸ್ಯ ಬಿ.ಎ.ಮುಹಮ್ಮದಲಿ ಕಮ್ಮರಡಿ ಮಾತನಾಡಿ ‘ತೃಪ್ತಿಕರವಾದ ಬದುಕನ್ನು ಈ ಲೋಕದಲ್ಲಿ ಮುಗಿಸಿ ಹೋದ ಖಾಸಿಮ್ ಅವರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ’ ಎಂದರು.
ಎಂ.ಫ್ರೆಂಡ್ಸ್ನ ಕೋಶಾಧಿಕಾರಿ ಅಬೂಬಕರ್ ಮಾತನಾಡಿ ‘ನಾನು ಮತ್ತು ಖಾಸಿಮ್ ಹಾಸ್ಟೆಲ್ ಸಹಪಾಠಿಗಳು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಮುದಾಯದ ಬಗ್ಗೆ ಅಪಾರ ಕಾಳಜಿ ಇತ್ತು. ಬಳಿಕ ಸಮುದಾಯದ ಅಭಿವೃದ್ಧಿಗಾಗಿ ಅವರು ಸದಾ ಕ್ರಿಯಾಶೀಲರಾಗಿದ್ದರು’ ಎಂದರು.
ಡಾ. ಶಾನವಾಝ್ ಮಾತನಾಡಿ ‘ಖಾಸಿಮ್ ಬಾಲ್ಯದಲ್ಲೇ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಈಗಲೂ ನೆನಪಿಗೆ ಬರುತ್ತಿದೆ. ಎಳೆಯ ಹರೆಯದಲ್ಲೇ ರಾಜಕೀಯ ವಿಶ್ಲೇಷಣೆಯನ್ನು ಮೈಗೂಡಿಸಿಕೊಂಡಿದ್ದರು. ಕುಟುಂಬದ ಸರ್ವರ ಜೊತೆಯೂ ಅವರು ಆತ್ಮೀಯರಾಗಿದ್ದರು’ ಎಂದರು.
ಎಂ.ಫ್ರೆಂಡ್ಸ್ನ ಎನ್ಆರ್ಐ ಸದಸ್ಯ ಫಾರೂಕ್ ಮುಹಮ್ಮದ್ ಮಾತನಾಡಿ ‘ಖಾಸಿಮ್ ಅವರದ್ದು ಸ್ನೇಹಮಯ ವ್ಯಕ್ತಿತ್ವವಾಗಿತ್ತು. ಹಲವು ನೆನಪುಗಳನ್ನು ಜೀವಂತವಾಗಿಸಿಕೊಂಡು ಹೋಗಿದ್ದಾರೆ’ ಎಂದರು.
ಎಚ್ಐಎಫ್ನ ಮುಹಮ್ಮದ್ ರಿಝ್ವಾನ್ ಮಾತನಾಡಿ ‘ನಿಸ್ವಾರ್ಥಿಯಾಗಿದ್ದ ಖಾಸಿಮ್ ಅವರನ್ನು ಸಮಾಜ ಸರಿಯಾಗಿ ಗುರುತಿಸಲಿಲ್ಲ ಎಂಬ ನೋವು ನನಗೀಗ ಕಾಡುತ್ತಿದೆ. ಅವರು ಕಂಡ ಕನಸನ್ನು ನನಸಾಗಿಲು ನಾವೆಲ್ಲರೂ ಪ್ರಯತ್ನಿಸೋಣ’ ಎಂದರು.
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಎ.ಕೆ.ಖಾಸಿಮ್ ಅವರ ತಂದೆ ಅಬ್ದುಲ್ ಹಮೀದ್ ಹಾಜಿ ಮತ್ತು ಕುಟುಂಬದ ಸದಸ್ಯರು, ಸ್ನೇಹಿತರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ನಿರೂಪಿಸಿದ ಪತ್ರಕರ್ತ ಮುಹಮ್ಮದ್ ಆರೀಫ್ ಪಡುಬಿದ್ರೆ ಅವರು ಡಾ.ಎ.ಕೆ.ಖಾಸಿಮ್ ಅವರ ನಿಧನಕ್ಕೆ ಖಾಸಿಮ್ ಅವರ ಸಹಪಾಠಿಯೂ ಆಗಿದ್ದ ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಅವರು ಮಾಡಿದ ಟ್ವೀಟ್ ವಾಚಿಸಿದರು.






.jpeg)

.jpeg)


.jpeg)

.jpeg)


.jpeg)

.jpeg)

.jpeg)


