ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ಗೆ ಸುಪ್ರೀಂ ಸೂಚನೆ
ಮಹಾರಾಷ್ಟ್ರ ಗೃಹಸಚಿವರ ವಿರುದ್ಧ ಸಿಬಿಐ ವಿಚಾರಣೆ

ಹೊಸದಿಲ್ಲಿ,ಮಾ.24: ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್ ಮುಖ್ ಅವರ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಸಿಬಿಐ ತನಿಖೆಯನ್ನು ನಡೆಸುವಂತೆ ಕೋರಿ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರಿಗೆ ಸೂಚಿಸಿದೆ.
ಇದು ಸಾಕಷ್ಟು ಗಂಭೀರ ವಿಷಯವಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಆರ್.ಸುಭಾಷ್ ರೆಡ್ಡಿ ಅವರ ಪೀಠವು,ವ್ಯಕ್ತಿಗಳ ನಡುವಿನ ವಿರಸದಿಂದಾಗಿ ಹಲವಾರು ಮಾಹಿತಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಹರಿದಾಡುತ್ತಿವೆ ಎಂದು ಹೇಳಿತು.
ರಾಜ್ಯದಲ್ಲಿ ವಿಚಾರಣೆಗಳನ್ನು ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ಮಹಾರಾಷ್ಟ್ರ ಸರಕಾರವು ಹಿಂದೆಗೆದುಕೊಂಡಿರುವುದರಿಂದ ಸಂವಿಧಾನದ ವಿಧಿ 32ರಡಿ ತಾನು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ಸಿಂಗ್ ಹೇಳಿದ್ದರು. ಇದನ್ನು ಪ್ರಶ್ನಿಸಿದ ನ್ಯಾಯಾಲಯವು ಸಂವಿಧಾನದ ವಿಧಿ 226ರಡಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿತು. ಇದಕ್ಕೆ ಸಿಂಗ್ ಪರ ವಕೀಲ ಮುಕುಲ ರೋಹಟ್ಗಿ ಒಪ್ಪಿಕೊಂಡರು.
ದೇಶಮುಖರನ್ನು ಪ್ರಕರಣದಲ್ಲಿ ಕಕ್ಷಿಯನ್ನಾಗಿ ಏಕೆ ಮಾಡಿಲ್ಲ ಎಂದೂ ನ್ಯಾಯಾಲಯವು ಪ್ರಶ್ನಿಸಿತು.







