ಪೊಲೀಸರ ಕಿರುಕುಳ ತಪ್ಪಿಸಿ: ಡಿಜಿಪಿಗೆ ಮನವಿ ಸಲ್ಲಿಸಿದ ರಕ್ಷಾ ರಾಮಯ್ಯ

ಬೆಂಗಳೂರು, ಮಾ.24: ರಾಜ್ಯದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ, ರಸ್ತೆಬದಿಗಳಲ್ಲಿ ಪೊಲೀಸರ ಕಿರುಕುಳ ತಪ್ಪಿಸಬೇಕೆಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಆಗ್ರಹಿಸಿದರು.
ಬುಧವಾರ ಇಲ್ಲಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರಿನ ಬೋಗಾದಿ–ಹಿನಕಲ್ ವರ್ತುಲ ರಸ್ತೆಯಲ್ಲಿ ಸಂಚಾರ ಪೊಲೀಸರ ಕಿರುಕುಳದಿಂದ ದೇವರಾಜ್ ಎಂಬುವರು ಮೃತಪಟ್ಟು, ಸುರೇಶ್ ಎಂಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಿಜಕ್ಕೂ ಅತ್ಯಂತ ಆಘಾತಕಾರಿ ಮತ್ತು ಅಮಾನವೀಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 1.90 ಕೋಟಿಗೂ ಹೆಚ್ಚು ವಾಹನಗಳಿದ್ದು, ಪ್ರತಿ ವರ್ಷ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ಮತ್ತೊಂದೆಡೆ ಸರಕಾರ ತನ್ನ ಆದಾಯ ಸಂಗ್ರಹಕ್ಕಾಗಿ ಸಂಚಾರ ನಿಯಗಮಗಳ ಉಲ್ಲಂಘನೆಯ ದಂಡದ ಮೊತ್ತ ಸಹ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಹೈರಾಣಾಗಿರುವ ಸಂದರ್ಭದಲ್ಲಿ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಟೋಲ್ಗಳನ್ನು ನಿರ್ಮಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಇದೇ ರೀತಿ ವಾಹನ ಸವಾರರ ಸುಲಿಗೆಯೂ ಹೆಚ್ಚಾಗುತ್ತಿದೆ ಎಂದರು.
ಸಂಚಾರ ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ತನ್ನ ಮೂಲ ಕರ್ತವ್ಯವನ್ನೆ ಮರೆತಂತೆ ವರ್ತಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಸಣ್ಣಪುಟ್ಟ ವ್ಯಾಪಾರಿಗಳು, ರೈತರು, ಜನ ಸಾಮಾನ್ಯರನ್ನೇ ಗುರಿಯಾಗಿಸಿಕೊಂಡು ದಂಡ ವಸೂಲಿ ಮಾಡುವ ಕೆಲಸದಲ್ಲಿ ಸಂಚಾರ ಪೊಲೀಸರು ನಿರತರಾಗಿದ್ದಾರೆ.
ಕೋವಿಡ್ ಸಂಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗ ಪೊಲೀಸರ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಬೋಗಾದಿಯಲ್ಲಿ ಇದು ಸ್ಫೋಟಗೊಂಡಿರುವುದು ಸಣ್ಣ ಉದಾಹರಣೆಯಾಗಿದೆ. ಎಲ್ಲ್ಲ ವಲಯಗಳಲ್ಲೂ ಹಗಲು ದರೋಡೆ, ಶೋಷಣೆ ನಡೆಯುತ್ತಿದ್ದು, ಇದರಿಂದ ಜನರ ಆಕ್ರೋಶ ಮಡುಗಟ್ಟಿದೆ. ಇದು ಯಾವ ಹಂತ ತಲುಪುತ್ತದೆಯೋ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.
ರಾಜ್ಯ ತಂತ್ರಜ್ಞಾನದಲ್ಲಿ ಮಂಚೂಣಿಯಲ್ಲಿದ್ದು, ಇಡೀ ಜಗತ್ತು ಕರ್ನಾಟಕದತ್ತ ನೋಡುತ್ತಿದೆ. ಇ-ಹೈವೆ, ಆಧುನಿಕ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಸರಕಾರಗಳು ಹೇಳಿಕೊಳ್ಳುತ್ತಿವೆ. ಆದರೆ, ಸಂಚಾರ ವ್ಯವಸ್ಥೆಯ ಮೇಲೆ ಕಣ್ಗಾವಲಿಡಲು ಇನ್ನು ಯಾಕೆ ಸಮರ್ಪಕವಾಗಿ ತಂತ್ರಜ್ಞಾನ ಬಳಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ತಂತ್ರಜ್ಞಾನದ ಸದ್ಬಳಕೆಯಿಂದ ಸಂಚಾರ ಪೊಲೀಸರ ಹಸ್ತಕ್ಷೇಪ, ಭ್ರಷ್ಟಾಚಾರ ಮತ್ತು ಜನರ ಕಿರುಕುಳ ತಪ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ತಾವು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಐಸಿಸಿ ಉಪಾಧ್ಯಕ್ಷೆ ಭವ್ಯ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







