"ದೈಹಿಕ ಕ್ಷಮತೆ ಆಧಾರದಲ್ಲಿ ಶಾಶ್ವತ ಆಯೋಗದಿಂದ ಹೊರಗಿಡಲ್ಪಟ್ಟ ಮಹಿಳೆಯರಿಗೆ ಸೌಲಭ್ಯ ನೀಡಿ"
ಸೇನೆಗೆ ಸುಪ್ರೀಂಕೋರ್ಟ್ ಸೂಚನೆ
ಹೊಸದಿಲ್ಲಿ: ದೈಹಿಕ ಕ್ಷಮತೆ ಆಧಾರದಲ್ಲಿ ಶಾಶ್ವತ ಆಯೋಗದಿಂದ ಹೊರಗಿಡಲ್ಪಟ್ಟಿರುವ ಮಹಿಳಾ ಅಧಿಕಾರಿಗಳಿಗೆ ಆ ಸೌಲಭ್ಯ ಒದಗಿಸುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ಆದೇಶಿಸಿದೆಯಲ್ಲದೆ ಈ ರೀತಿಯ ಮೌಲ್ಯಮಾಪನಾ ಪ್ರಕ್ರಿಯೆ ತರ್ಕಹೀನ ಎಂದು ಹೇಳಿದೆ.
ಶಾಶ್ವತ ಆಯೋಗದಿಂದ ವಂಚಿಸಲ್ಪಟ್ಟ ಸುಮಾರು 650 ಅಧಿಕಾರಿಗಳು ಅಪೀಲುಗಳನ್ನು ಒಂದು ತಿಂಗಳುಗಳೊಳಗೆ ಮರುಪರಿಶೀಲಿಸುವಂತೆ ಸೇನೆಗೆ ಸೂಚಿಸಿದ ಸುಪ್ರೀಂ ಕೋರ್ಟ್, ಅದೇ ಸಮಯ ಈ ಮಹಿಳಾ ಅಧಿಕಾರಿಗಳು ಸಾಮಾನ್ಯ ದೈಹಿಕ ಕ್ಷಮತೆ ಮಾನದಂಡ ಪೂರೈಸಬೇಕಿದೆ ಎಂಬುದನ್ನು ಒಪ್ಪಿದೆ.
ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗಕ್ಕೆ ಅನುಮತಿ ನೀಡಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶದಂತೆ ನಡೆದುಕೊಳ್ಳಲು ವಿಫಲರಾದವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕೆಂದು ಖಾಯಂ ಆಯೋಗದಲ್ಲಿ ಸೇರ್ಪಡೆಗೆ ಅಪೀಲು ಸಲ್ಲಿಸಿದ ಸೇನೆ ಮತ್ತು ನೌಕಾ ಪಡೆಯ ಮಹಿಳಾ ಅಧಿಕಾರಿಗಳು ಮನವಿ ಮಾಡಿದ್ದರು.
"ಮಹಿಳೆಯರಿಗೆ ಸೇನಾಪಡೆಗಳಲ್ಲಿನ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಮಕ್ಕಳ ಲಾಲನೆಪಾಲನೆ ಹಾಗೂ ಮನೆಗೆಲಸಗಳ ಒತ್ತಡವನ್ನು ಅವರ ಮೇಲೆ ಹೇರಿದಾಗ ಇನ್ನಷ್ಟು ಕಷ್ಟವಾಗುತ್ತದೆ, ಶಾಶ್ವತ ಆಯೋಗವನ್ನು ಅವರಿಗೆ ನೀಡುವಾಗ ಹತ್ತು ವರ್ಷಗಳ ಹಿಂದಿನ ಅವರ ದೈಹಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು" ಎಂದು ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಹಾಗೂ ಎಂ.ಆರ್ ಶಾ ಅವರ ಪೀಠ ಹೇಳಿದೆ.