ಕೊರೋನ ಸಂದರ್ಭದಲ್ಲಿ ಸರಕಾರ ಪರಿಹಾರ ಒದಗಿಸುವ ಬದಲು ಭೀತಿ ಸೃಷ್ಟಿಸುತ್ತಿದೆ: ಹರಿಕೃಷ್ಣ ಪುನರೂರು
ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರ ಉದ್ಘಾಟನೆ

ಮಂಗಳೂರು, ಮಾ.26: ಪ್ರಸಕ್ತ ಕಾಲದಲ್ಲಿ ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರ ಬಹಳಷ್ಟು ಅಗತ್ಯ ಇದ್ದು, ಕೊರೋನ ಸಂದರ್ಭದಲ್ಲಿ ಸರಕಾರ ಪರಿಹಾರ ಒದಗಿಸುವ ಬದಲು ಭೀತಿ ಸೃಷ್ಟಿಸುತ್ತಿದೆ. ಸರಕಾರ ಉತ್ತಮ ಸೇವೆ ನೀಡಲಿ ಎಂದು ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಅಖಿಲ ಭಾರತ ಬ್ಯಾರಿ ಪರಿಷತ್ ಹಾಗೂ ವೆಲ್ನೆಸ್ಸ್ ಹೆಲ್ಪ್ಲೈನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಹಾರೂನ್ ಮಾತನಾಡಿ, ಕೊರೋನ ಸಮಾಜಕ್ಕೆ ಮಾರಕವಾದ ವೈರಸ್. ಜನಜೀವನ ಮತ್ತು ಆರ್ಥಿಕ ಸ್ಥಿತಿ ಮೇಲೆ ಮಹತ್ತರ ಪರಿಣಾಮ ಕೊರೋನ ಬೀರಿದೆ. ನೆಮ್ಮದಿಯತ್ತ ತಲುಪುವಾಗ ಇದರ ಎರಡನೇ ಅಲೆ ಎದ್ದು ಭೀತಿ ಸೃಷ್ಟಿಸಿದೆ. ಈ ವಿಚಾರದಲ್ಲಿ ಅನಗತ್ಯ ಚರ್ಚೆ ಮಾಡಿ ಜನರನ್ನು ಸಂಶಯದತ್ತ ದೂಡುವುದು ಬೇಡ ಎಂದರು. ಅಹ್ಮದ್ ಖಾಸಿಮ್ ಎಚ್.ಕೆ. ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಬ್ಯಾರಿ ಪರಿಷತ್ ಸ್ಥಾಪಕಾಧ್ಯಕ್ಷ ಜೆ.ಹುಸೈನ್, ಗೌರವ ಅಧ್ಯಕ್ಷ ಯೂಸುಫ್ ವಕ್ತಾರ್, ಅಧ್ಯಕ್ಷ ಅಬೂಬಕರ್ ಪಲ್ಲಮಜಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಗೌರವ ಸಲಹೆಗಾರ ಕಾರ್ಪೊರೇಟರ್ ಅಬ್ದುಲ್ ರವೂಫ್, ಝಿಯಾ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಅಝೀಝ್ ಹಕ್ ಸ್ವಾಗತಿಸಿದರು. ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು.





