ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ ಉದ್ಘಾಟನೆ

ಉಳ್ಳಾಲ, ಮಾ.27: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹಾಗೂ ಮೇಲ್ಮನೆ ಇದರ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಸೈಯದ್ ಮದನಿ ಶಾಲೆಯಲ್ಲಿ ಆಯೋಜಿಸಿರುವ ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ದಫ್ ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದಪ್ ಮೂಲಕ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಉದ್ಘಾಟಿಸಲು ಅವಕಾಶ ನೀಡಿದ್ದು ತುಂಬಾ ಸಂತೋಷ ತಂದಿದೆ. ದಫ್ ನಮ್ಮ ಸಂಸ್ಕೃತಿ ಆಗಿದ್ದು, ಹಲವು ವರ್ಷಗಳ ಕಾಲ ಬಳಿಕ ದಫ್ ಬಾರಿಸಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆಲಿಕುಂಞಿ ಪಾರೆ ಮಾತನಾಡಿ, ಬ್ಯಾರಿ ಭಾಷೆ ಪ್ರೀತಿ, ಸಹೋದರತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಭಾಷೆಗೆ 140 ವರ್ಷಗಳ ಹಿಂದೆ ಖಾಝಿ ತಲಪಾಡಿ ಬಾಪಕುಂಞಿ ಮುಸ್ಲಿಯಾರ್ ಮುನ್ನುಡಿ ಬರೆದಿದ್ದರು. ಈಗ ಈ ಭಾಷೆಗೆ ಲಿಪಿ ಕಂಡು ಹಿಡಿದಿರುವುದು ಸ್ವಾಗತಾರ್ಹ. ಲಿಪಿ ಭಾಷೆಗೆ ಶ್ರೀಮಂತಿಕೆ ತಂದು ಕೊಡುತ್ತದೆ ಎಂದರು.
ರಾಜ್ಯ ದ ಲಿಂಗಾಯತ, ಒಕ್ಕಲಿಗ ಜಾತಿಗಳಿಗೆ ಸರಕಾರ ಪ್ರತ್ಯೇಕ ನಿಗಮ, ಪ್ರಾಧಿಕಾರ ರಚಿಸಿದಂತೆ 20 ಲಕ್ಷದಷ್ಟಿರುವ ಬ್ಯಾರಿ ಅಭಿವೃದ್ಧಿಗೂ ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಯಾರಿ ಅಕಾಡಮಿಯ ದ್ವೈಮಾಸಿಕ ‘ಬೆಲ್ಕಿರಿ’ಯನ್ನು ಅಬ್ಬಾಸ್ ಉಚ್ಚಿಲ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿತ ಅಧ್ಯಕ್ಷ ರಹೀಂ ಉಚ್ಚಿಲ, ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಕೆ.ಎಂ.ಮುನೀರ್ ಬಾವ, ನಗರಸಭೆ ಕೌನ್ಸಿಲರ್ ಅಸ್ಗರ್ ಅಲಿ, ಇಸ್ಮಾಯೀಲ್ ಯು.ಎ., ಮದನಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಇಸ್ಮಾಯೀಲ್, ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ, ಮದನಿ ಶಾಲೆಯ ಮುಖ್ಯೋಪಾಧ್ಯಾಯ ದೇವಪ್ಪ ಶೆಟ್ಟಿ, ಮೇಲ್ತನೆ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ, ಅನ್ವರ್ ಸಾದತ್ , ಅಶೀರುದ್ದೀನ್ ಸಾರ್ತಬೈಲ್, ಬಶೀರ್ ಕಲ್ಕಟ್ಟ, ರಿಯಾಝ್ ಮಂಗಳೂರು, ಬಶೀರ್ ಅಹ್ಮದ್ ಕಿನ್ಯ, ರಫೀಕ್ ಕಲ್ಕಟ್ಟ, ಮುಹಮ್ಮದ್ ಬಾಷಾ ನಾಟೆಕಲ್, ಮುತ್ತಲಿಬ್ ಕಿನ್ಯ ಉಪಸ್ಥಿತರಿದ್ದರು.
ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ಅಕಾಡಮಿ ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.






.gif)
.gif)
.gif)

