ಬಿಎಸ್ವೈ ಕುಟುಂಬ ರಾಜಕಾರಣಕ್ಕೆ ರಮೇಶ್ ಜಾರಕಿಹೊಳಿ ಸಹಿತ ಹಲವರು ಬಲಿಪಶು: ಯತ್ನಾಳ್ ಆರೋಪ
ಫೇಸ್ ಬುಕ್ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ ವಿಜಯಪುರದ ಬಿಜೆಪಿ ಶಾಸಕ

ಬೆಂಗಳೂರು, ಮಾ.27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಕುಟುಂಬ ರಾಜಕಾರಣಕ್ಕಾಗಿ ರಮೇಶ್ ಜಾರಕಿಹೊಳಿ, ಈಶ್ವರಪ್ಪ, ಪ್ರಾಮಾಣಿಕ ಪತ್ರಕರ್ತರುಗಳಾದ ಎಂ.ಬಿ.ಮರಮ್ಕಲ್ ಹಾಗೂ ಮಹಾದೇವ ಪ್ರಕಾಶ್ ಮತ್ತು ಅನೇಕ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು ಬಲಿಪಶುಗಳಾಗಿದ್ದಾರೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಯತ್ನಾಳ್, ಹೊಗಳು ಭಟ್ಟರು ದಲ್ಲಾಳಿಗಳು ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಇತ್ತೀಚಿನ ದಿನಗಳಲ್ಲಿ ತಮ್ಮ ಕುಹಕತನ ಮತ್ತು ಯುವರಾಜನ ಅಧಿಕಾರ ವ ಹಣ ದಾಹಕ್ಕಾಗಿ ತಮ್ಮ ಅತ್ಯಂತ ಆತ್ಮೀಯ ಶೋಭಾ ಕರಂದ್ಲಾಜೆ, ರಮೇಶ್ ಜಾರಕಿಹೊಳಿ, ಈಶ್ವರಪ್ಪ, ಪ್ರಾಮಾಣಿಕ ಪತ್ರಕರ್ತರುಗಳಾದ ಎಂ.ಬಿ.ಮರಮ್ಕಲ್ ಹಾಗೂ ಮಹಾದೇವ ಪ್ರಕಾಶ್ ಮತ್ತು ಅನೇಕ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು ಬಲಿಪಶುಗಳಾಗಿದ್ದಾರೆ ಎಂದು ಆರೋಪಿಸಿದರಲ್ಲದೆ ಯಡಿಯೂರಪ್ಪರ ವಿರುದ್ಧ ತೀರಾ ವೈಯಕ್ತಿಕ ಆರೋಪಗಳನ್ನು ಕೂಡಾ ಮಾಡಿದ್ದಾರೆ.
ಮಾ.25ರಂದು ಯಡಿಯೂರಪ್ಪ ತಮ್ಮ ಶಕ್ತಿ ಪ್ರದರ್ಶನ ಮಾಡಲಿಕ್ಕೆ, ಕೇಂದ್ರಿಯ ಪಕ್ಷವನ್ನು ಅಂಜಿಸಲು ತಮ್ಮ ಜೊತೆ 65 ಶಾಸಕರ ಇದ್ದಾರೆ ಎಂದು ತೋರಿಸಲು ಸಭೆ ನಡೆಸಿದ್ದಾರೆಯೇ ಹೊರತು, ಶಾಸಕರ ಸಮಸ್ಯೆಗಳನ್ನು ಪರಿಹರಿಸಲು ಕರೆದ ಸಭೆ ಅಲ್ಲ. ಇಂತಹ ಎಷ್ಟೋ ಸಭೆಗಳು ಕರೆದಿದ್ದಾರೆ ಅದರ ಫಲಶ್ರುತಿ ಶೂನ್ಯ ಎಂದು ಯತ್ನಾಳ್ ಟೀಕಿಸಿದ್ದಾರೆ.
ಸಭೆಯಲ್ಲಿ ಸುಮಾರು 65 ಶಾಸಕರು ತನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹಿ ಸಂಗ್ರಹ ಅಭಿಯಾನ ಮಾಡಿದ್ದಾರೆ ಎಂಬುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ಸಭೆಯಲ್ಲಿ ಭಾಗವಹಿಸಿದ ಅನೇಕ ಶಾಸಕರುಗಳಿಗೆ ವಿಚಾರಿಸಿದಾಗ ಒಬ್ಬರೂ ಸಹ ಸಹಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಅಭಿವೃದ್ಧಿ ಹಣ ಬಿಡುಗಡೆ ಮತ್ತು ಶಾಸಕರ ಕ್ಷೇತ್ರಗಳಿಗೆ ಅನುದಾನ ಪತ್ರದಲ್ಲಿ ನನ್ನ ಬಗ್ಗೆ ಉಲ್ಲೇಖ ಮಾಡಿದ್ದರೆ ಅದು ಶಾಸಕರ ಗಮನಕ್ಕೆ ತರದೆ ತಿರುಚಿದ್ದರೆ ಅದು ಮೋಸ ಮಾಡಿದಂತೆ ಎಂದು ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಶಾಸಕರ ಭಾವನೆ ಮತ್ತು ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇಲ್ಲದೆ ಇರುವುದು ಶಾಸಕರಲ್ಲಿ ತೀವ್ರ ಅಸಮಾಧಾನ ಇದೆ. ಶಾಸಕಾಂಗ ಸಭೆ ಕರೆದರೆ ಭಿನ್ನಮತ ಸ್ಫೋಟ ಆಗುವ ಭಯದಿಂದ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಈ ಅಧೀವೇಶನ ಮುಕ್ತಾಯಗೊಳಿಸಿದ್ದು ದುರದೃಷ್ಟಕರ ಎಂದು ಯತ್ನಾಳ್ ಹೇಳಿದ್ದಾರೆ.
25-03-2021 ರಂದು ನಡೆದ ಸುಮಾರು 25 ಮಾನ್ಯ ಶಾಸಕರ ಹಾಗೂ ಸಚಿವರ ಸಭೆ ಮಾನ್ಯ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ...
Posted by B R Patil Yatnal on Friday, 26 March 2021







