ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶುಚಿತ್ವದ ಕೊರತೆ: ಆರೋಗ್ಯ ಸಚಿವರ ಅಸಮಾಧಾನ
ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸುವಂತೆ ಡಾ.ಸುಧಾಕರ್ ಸೂಚನೆ

ಉಡುಪಿ, ಮಾ. 30: ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಗೆ ಇಂದು ಭೇಟಿ ನೀಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸ್ವಚ್ಛತೆಗೆ ಆದ್ಯತೆ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸುವಂತೆ ಜಿಲ್ಲಾ ಸರ್ಜನ್ಗೆ ಸೂಚನೆ ನೀಡಿದರು
ಸಚಿವರು ಆಸ್ಪತ್ರೆಯ ಮಹಿಳಾ ವಾರ್ಡ್ಗೆ ಭೇಟಿ ನೀಡಿದ ಸಂದರ್ಭ ಬೆಡ್ಗಳಲ್ಲಿನ ಬೆಡ್ಶೀಟ್ಗಳು ಶುಚಿಯಾಗಿಲ್ಲದಿರುವುದನ್ನು ಗಮನಿಸಿದರು. ಈ ಬಗ್ಗೆ ಸಂಬಂಧ ಪಟ್ಟ ಹಿರಿಯ ಶುಶ್ರೂಷಕಿಯನ್ನು ಕರೆಸಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು. ಅಲ್ಲದೆ ಇದರ ಗುತ್ತಿಗೆ ವಹಿಸಿರುವ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿ, ಗುತ್ತಿಗೆಯನ್ನು ರದ್ದುಗೊಳಿಸುವಂತೆ ಅವರು ಸೂಚನೆ ನೀಡಿದರು.
ಕೊರತೆಗಳ ಬಗ್ಗೆ ಸಚಿವರಿಗೆ ದೂರು: ಆಸ್ಪತ್ರೆಯ ಮಹಿಳಾ ವಾರ್ಡ್ಗೆ ಭೇಟಿ ನೀಡಿದ ವೇಳೆ ರೋಗಿಯ ಸಂಬಂಧಿಕರು ಸಚಿವರ ಮುಂದೆ ಆಸ್ಪತ್ರೆಯ ಕೆಲವೊಂದು ಕುಂದು ಕೊರತೆಗಳ ಬಗ್ಗೆ ದೂರಿಕೊಂಡರು.
ಬೆಡ್ನಲ್ಲಿ ಮಲಗಿಕೊಂಡೇ ಇರುವ ವೃದ್ಧೆಯನ್ನು ಎಕ್ಸ್ರೇ ಸೇರಿದಂತೆ ಇತರ ಪರೀಕ್ಷೆಗೆ ಕರೆದುಕೊಂಡು ಹೋಗಲು ಸ್ಟಕ್ಚರ್ ಇಲ್ಲದೆ ಸಮಸ್ಯೆಯಾಗಿದೆ. ಗಾಲಿ ಕುರ್ಚಿಯಲ್ಲಿ ಅವರನ್ನು ಕರೆದುಕೊಂಡು ಹೋಗಲು ಆಗುವುದಿಲ್ಲ ಎಂದು ಮಹಿಳೆಯೊಬ್ಬರು ಸಚಿವರಲ್ಲಿ ದೂರಿದರು.
ಆಸ್ಪತ್ರೆಗೆ ಬರುವ ರೋಗಿಗಳನ್ನು ಗಾಲಿ ಕುರ್ಚಿಯಿಂದ ಬೆಡ್ನಲ್ಲಿ ಮಲಗಿಸುವ ಕೆಲಸವನ್ನು ನರ್ಸ್ಗಳು ಮಾಡುತ್ತಿಲ್ಲ. ನಾವು ಮಾಡಿದರೆ ನಮ್ಮನ್ನೇ ಹೊರಗೆ ಕಳುಹಿಸುತ್ತಾರೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಚಿವರು, ಸರ್ಜನ್ ಡಾ.ಮಧುಸೂದನ್ ನಾಯಕ್ ಅವರಿಗೆ ಸೂಚಿಸಿದರು.
ಜನೌಷಧಿ ಕೇಂದ್ರಕ್ಕೆ ಸೂಚನೆ
ಆಸ್ಪತ್ರೆಯ ಔಷಧಾಲಯ, ತುರ್ತು ಚಿಕಿತ್ಸಾ ಘಟಕ ಮತ್ತು ಕೋವಿಡ್ ಲಸಿಕಾ ಕೇಂದ್ರಗಳನ್ನು ಪರಿಶೀಲಿಸಿದ ಸಚಿವರು, ಆಸ್ಪತ್ರೆಯಲ್ಲಿ ಜನ ಔಷಧಿ ಕೇಂದ್ರ ಸ್ಥಾಪಿಸುಂತೆ ಸರ್ಜನ್ಗೆ ಸೂಚನೆ ನೀಡಿದರು.
ಕೋವಿಡ್ -19 ಲಸಿಕಾ ಕೇಂದ್ರಕ್ಕೆ ತೆರಳಿದ ಸಚಿವರು, ಲಸಿಕೆ ಹಾಕಲು ಬಂದವರಲ್ಲಿ ಲಸಿಕೆ ಕುರಿತು ವಿಚಾರಿಸಿದರು. ಬಳಿಕ ಸಚಿವರ ಸಮ್ಮುಖದಲ್ಲಿಯೇ ಆಸ್ಪತ್ರೆಯ ಸಿಬ್ಬಂದಿಗಳು, ಕೋವಿಡ್ ಲಸಿಕೆಯನ್ನು ನೀಡಿದರು. ಇದಕ್ಕೂ ಮುನ್ನ ಸಚಿವರು, ನಗರದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಚಿವರು ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ಅಲ್ಲಿಂದ ಸಚಿವರು ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಾ.ಬಿ.ಆರ್. ಶೆಟ್ಟಿ, ಅಲ್ಲಿನ ವೈದ್ಯಕೀಯ ಅಧೀಕ್ಷಕಿ ಡಾ.ಶಿಕಾ ಗಾರ್ಗ್ ಮೊದಲಾದವರು ಉಪಸ್ಥಿತರಿದ್ದರು.
ನರ್ಸ್ಗಳಿಗೆ ಸಚಿವರಿಂದ ಪಾಠ
ಜಿಲ್ಲಾಸ್ಪತ್ರೆಯಲ್ಲಿ ಶುಚಿತ್ವ ಕಾಪಾಡದೆ ನಿರ್ಲಕ್ಷ ವಹಿಸಿದ್ದ ನರ್ಸ್ಗಳಿಗೆ ಸಚಿವ ಡಾ.ಕೆ.ಸುಧಾಕರ್ ಕರ್ತವ್ಯದ ಪಾಠ ಮಾಡಿದರು.
‘ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೇವೆಯನ್ನು ನಾವು ನೀಡಬೇಕು. ಅವರಿಗಿಂತ ಹೆಚ್ಚಿನ ಸಂಬಳ ನಾವು ನೀಡುತ್ತೇವೆ. ಆದರೆ ಸೇವೆ ಮಾತ್ರ ಅವರ ಅರ್ಧದಷ್ಟು ನಮ್ಮಲ್ಲಿ ಇರುವುದಿಲ್ಲ’ ಎಂದು ಸಚಿವರು ಹೇಳಿದರು.










