ಅತ್ಯಾಚಾರ ಆರೋಪಿಯನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ ?: ಸರಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಮಾ.30: ಸಂತ್ರಸ್ತೆ ನಿರ್ಭಿತಿಯಿಂದ, ಯಾವುದೇ ಪ್ರಭಾವಕ್ಕೂ ಒಳಗಾಗದೆ, ಯಾವುದೇ ಅಂಜಿಕೆಯಿಲ್ಲದೆ, ಒತ್ತಡವಿಲ್ಲದೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾಳೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ. ಸಂತ್ರಸ್ತೆ ಕೋರ್ಟಿಗೆ ಬಂದು ಹೇಳಿಕೆ ನೀಡಿದ ಮೇಲೂ ಅತ್ಯಾಚಾರ ಆರೋಪಿಯ ಬಂಧನವಾಗಲಿಲ್ಲವೆಂದರೆ ಏನರ್ಥ ಬಸವರಾಜ ಬೊಮ್ಮಾಯಿ ಅವರೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಯುವತಿ ವಿಡಿಯೋ ಹೇಳಿಕೆ ನೀಡಿದಾಗಲೂ ಕೇಸ್ ಹಾಕಲಿಲ್ಲ, ಸಂತ್ರಸ್ತೆ ದೂರು ಸಲ್ಲಿಸಿ, ಎಫ್ಐಆರ್ ದಾಖಲಾದರೂ ಬಂಧಿಸಲಿಲ್ಲ, ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದರೂ ಬಂಧನವಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಇಷ್ಟಾದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ? ಜನತೆಗೆ ಕಾನೂನಿನ ಮೇಲಿದ್ದ ನಂಬಿಕೆಯನ್ನೇಕೆ ನಾಶಗೊಳಿಸುತ್ತಿದ್ದೀರಿ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಂತ್ರಸ್ತೆ ಬಂದು ನ್ಯಾಯಾಧೀಶರೆದುರು ಹೇಳಿಕೆಯನ್ನೂ ಕೊಟ್ಟಾಯಿತು. ಇಷ್ಟಾದರೂ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಬೀದಿ ಗೂಳಿಯಂತೆ ತಿರುಗಿಕೊಂಡಿದ್ದಾರೆ, ಇನ್ನೂ ಕೂಡ ಆರೋಪಿಯ ಬಂಧನವಾಗಲಿಲ್ಲ ಏಕೆ ಬಿಲ್ಡಪ್ ಬೊಮ್ಮಾಯಿ ಅವರೇ? ರಾಜ್ಯ ಬಿಜೆಪಿ, ಬಸವರಾಜ ಬೊಮ್ಮಾಯಿ ಅವರೇ ಈಗ ಹೇಳಿ, ಅತ್ಯಾಚಾರ ಆರೋಪಿಯ ಬಂಧನ ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.





