ಮೂಡುಬಿದಿರೆ: ದುಷ್ಕರ್ಮಿಗಳಿಂದ ಬೈಕ್ ಅಪಹರಣ, ಕಳ್ಳತನ, ಕಳ್ಳತನಕ್ಕೆ ಯತ್ನ
ಮಂಗಳೂರು, ಮಾ.31: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಬೈಕ್ ಅಪಹರಣ, ಕಳ್ಳತನ ಮತ್ತು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಕಡಂದಲೆಯ ಬಿಟಿ ನಗರದಲ್ಲಿ ರಾಜೇಶ್ ಎಂಬವರು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ತೋರಿಸಿ ಬೈಕ್ ನಿಲ್ಲಿಸಿದ್ದಾರೆ. ಅಲ್ಲದೆ ಸವಾರನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಆತನ ಕಿಸೆಯಲ್ಲಿದ್ದ 2 ಸಾವಿರ ರೂ.ನಗದು, ಮೊಬೈಲ್ ಕಿತ್ತು ಬೈಕ್ನಲ್ಲೇ ಪರಾರಿಯಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮೂಡುಬಿದಿರೆಯ ಗಾಂಧಿನಗರದ ಕಡೆಪಳ್ಳದ ಹರಿಶ್ಚಂದ್ರ ನಾಯಕ್ ಎಂಬವರ ವನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಮ್ನಿ ಕಾರಿನ ಗಾಜು ಪುಡಿಗೈದು ಅದರೊಳಗಿದ್ದ 4 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಅಲ್ಲದೆ ಮನೆಯ ಬಾಗಿಲನ್ನು ಕಾಲಿನಿಂದ ತುಳಿದು ಒಳಗೆ ನುಗ್ಗಲೆತ್ನಿಸಿದ್ದಾರೆ. ಮನೆಯೊಳಗಿದ್ದವರು ಸದ್ದು ಕೇಳಿ ವಿದ್ಯುತ್ ದೀಪ ಹಾಕಿದಾಗ ಕಳ್ಳರು ಪರಾರಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತೋಡಾರಿನ ಅರುಣ್ ಎಂಬವರ ಮನೆಗೆ ಕಲ್ಲೆಸೆದು ಕಾಲಿನಿಂದ ಬಾಗಿಲು ತುಳಿದು ಒಳನುಗ್ಗಲೆತ್ನಿಸಿದ್ದಾರೆ. ತಕ್ಷಣ ಮನೆಯವರು ಎದ್ದು ಬೊಬ್ಬೆ ಹೊಡೆದಾಗ ಕಳ್ಳರು ಕಾಲ್ಕಿತ್ತಿದ್ದಾರೆ.
ಪ್ರಕರಣ ನಡೆದಿರುವ ಮೂರು ಸ್ಥಳಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.