ಕೊರಗಜ್ಜ ಕ್ಷೇತ್ರ ಮಲಿನಗೊಳಿಸಿದ ಪ್ರಕರಣ: ಓರ್ವ ಮೃತಪಟ್ಟ ವರದಿಯ ಬಗ್ಗೆ ಮೃತನ ತಾಯಿ ಹೇಳಿದ್ದೇನು?
ಮಂಗಳೂರು, ಎ.1: ‘ನನ್ನ ಮಗ ಕಳೆದ ಒಂದುವರೆ ವರ್ಷದಿಂದ ಎಲ್ಲಿಗೂ ಹೋದವನಲ್ಲ. ಆತ ಅಸೌಖ್ಯದಿಂದ ಮನೆಯಲ್ಲೇ ಇದ್ದ. ಯಾಕೆ ಆ ಇಬ್ಬರು ಯುವಕರು ಮೃತಪಟ್ಟ ನನ್ನ ಮಗನ ಹೆಸರು ಇದಕ್ಕೆ ಎಳೆದು ತಂದರೊ... ಗೊತ್ತಾಗುತ್ತಿಲ್ಲ’. ಇದು ಕೊರಗಜ್ಜ ಕ್ಷೇತ್ರಗಳನ್ನು ಮಲಿನಗೊಳಿಸಿದ್ದಾನೆ ಮತ್ತು ಆ ಹಿನ್ನೆಲೆಯಲ್ಲೇ ಮೃತಪಟ್ಟಿದ್ದಾನೆ ಎನ್ನಲಾದ ಜೋಕಟ್ಟೆಯ ನವಾಝ್ನ ತಾಯಿ ಬೀಫಾತುಮ್ಮಾ ಅವರ ಅಳಲು.
‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಅವರು ‘ದುಬೈಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಗ ನವಾಝ್ ಅಸೌಖ್ಯದಿಂದಾಗಿ ಊರಿಗೆ ಬಂದಿದ್ದ. ಒಂದುವರೆ ವರ್ಷದಿಂದ ಅವನು ಮನೆಯಲ್ಲೇ ಇದ್ದ. ಎಲ್ಲಿಗೂ ಹೋದವನಲ್ಲ. ಹೊಟ್ಟೆನೋವು, ನ್ಯುಮೋನಿಯಾ ಮಾತ್ರ ಅಲ್ಲ ಮಾರಕ ರೋಗದಿಂದ ಬಳಲುತ್ತಿದ್ದ. ಅವ ಯಾವತ್ತೂ ರಕ್ತ ವಾಂತಿ ಮಾಡಿದ್ದಿಲ್ಲ. ಫೆ.23ರಂದು ನನ್ನ ಏಕೈಕ ಮಗ ನವಾಝ್ ನಮ್ಮನ್ನು ಬಿಟ್ಟು ಹೋದ. ಅದೇ ದು:ಖದಲ್ಲಿ ನಾವಿದ್ದೇವೆ. ಹೀಗಿರುವಾಗ ಇಂದು ಇಂತಹ ಆಘಾತಕಾರಿ ಸುದ್ದಿ ಬಂದಿದೆ’ ಎಂದು ಬೀಫಾತುಮ್ಮಾ ಹೇಳಿದರು.
‘ನನಗೆ ಇಬ್ಬರು ಹೆಣ್ಣು ಮತ್ತು ಒಬ್ಬ ಮಗ. ಗಂಡ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಾರೆ. ಹಲವು ಕನಸಿಟ್ಟು ದುಬೈಗೆ ಮಗನನ್ನು ಕಳಿಸಿದ್ದೆವು. ಅಲ್ಲಿ ಆಗಾಗ ಅವನ ಆರೋಗ್ಯ ಕೆಡುತ್ತಿತ್ತು. ಮನೆಗೆ ಬಂದ ಬಳಿಕ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗಲೆಲ್ಲಾ ಒಂದೊಂದೇ ರೋಗ ಬೆಳಕಿಗೆ ಬರತೊಡಗಿತು. ಮಾರಕ ರೋಗ ಇದೆ ಎಂದು ಗೊತ್ತಾದ ಬಳಿಕವಂತೂ ಅವ ತುಂಬಾ ಬೇಸರದಲ್ಲಿದ್ದ. ಹೀಗಿರುವಾಗ ಅವ ಕೊರಗಜ್ಜನ ದೈವಸ್ಥಾನಗಳನ್ನು ಅಪವಿತ್ರಗೊಳಿಸಲು ಯಾವಾಗ ಹೋಗುವುದು? ಆ ಇಬ್ಬರು ಯುವಕರು ನನ್ನ ಮಗನನ್ನು ಯಾಕೆ ಈ ವಿಷಯದಲ್ಲಿ ಎಳೆದು ತಂದರು ಎಂದು ಗೊತ್ತಾಗುತ್ತಿಲ್ಲ. ಇಂದು ಈ ವಿಷಯ ಕೇಳಿ ತಿಳಿದುಕೊಂಡ ಬಳಿಕ ನಾವು ತುಂಬಾ ನೊಂದಿದ್ದೇವೆ’ ಎಂದು ಬೀಫಾತುಮ್ಮ ಅಳಲು ತೋಡಿಕೊಂಡರು.
ಹೇಳಿಕೆ ನೀಡುವ ಮುನ್ನ ಪೊಲೀಸ್ ಕಮಿಷನರ್ ತನಿಖೆ ನಡೆಸಲಿ: ಡಿವೈಎಫ್ಐ
ಕೊರಗಜ್ಜನ ಕ್ಷೇತ್ರ ಮಲಿನಗೊಳಿಸಿದ ಘಟನೆಗೆ ಸಂಬಂಧಿಸಿ ಇಬ್ಬರು ಯುವಕರು ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ಹಾಜರಾಗಿ ತಪ್ಪೊಪ್ಪಿಕೊಂಡಿರುವುದನ್ನು ಆಧರಿಸಿ ಪೊಲೀಸ್ ಆಯುಕ್ತ ಶಶಿಕುಮಾರ್ ವಸ್ತುಸ್ಥಿತಿ ಅರಿತುಕೊಳ್ಳದೆ ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಕ್ರಮ ಸಮರ್ಥನೀಯವಲ್ಲ. ಪೊಲೀಸ್ ಆಯುಕ್ತರು ಹೇಳಿಕೆ ನೀಡುವ ಮುನ್ನ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಕೊರಗಜ್ಜನ ಕ್ಷೇತ್ರ ಅಪವಿತ್ರಗೊಳಿಸುವ ಘಟನೆಗಳು ನಡೆದಿರುವುದು ಮೂರು ತಿಂಗಳನಿಂದೀಚೆಗೆ. ವರದಿಯಲ್ಲಿ ಉಲ್ಲೇಖಿಸಿರುವಂತೆ ರಕ್ತಕಾರಿ ಮೃತಪಟ್ಟಿದ್ದಾನೆ ಎನ್ನಲಾದ ನವಾಝ್ ಮರಣ ಹೊಂದಿ ನಲವತ್ತು ದಿನಗಳು ದಾಟಿವೆ. ಆತ ಮೃತಪಟ್ಟಿರುವುದು ಎಚ್ಐವಿ ಪಾಸಿಟಿವ್ನಿಂದ. ಕೂಲಿ ಕಾರ್ಮಿಕನ ಏಕೈಕ ಗಂಡು ಮಗನಾಗಿರುವ ಈತನೂ ಕೂಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಶೆಡ್ಡೌನ್ ಕೆಲಸಕ್ಕಾಗಿ ಗಲ್ಫ್ಗೆ ನಾಲ್ಕು ತಿಂಗಳಮಟ್ಟಿಗೆ ಹೋಗಿ ಬಂದಿದ್ದ. ಒಂದೂವರೆ ವರ್ಷದ ಹಿಂದೆ ತೀವ್ರ ಅನಾರೋಗ್ಯಕ್ಕೆ ಗುರಿಯಾದಾಗ ಎಚ್ಐವಿ ದೃಢ ಪಟ್ಟಿತ್ತು. ಆ ನಂತರ ಆತ ಅನಾರೋಗ್ಯದಿಂದ ಮನೆಯಲ್ಲೇ ಇದ್ದ. ಹಾಗಾಗಿ ಆತ ಎಲ್ಲಿಗೂ ಹೋಗುವ ಸಾಧ್ಯತೆ ಇಲ್ಲ. ಈ ಪ್ರಕರಣದ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆ. ಪೊಲೀಸ್ ಕಮಿಷನರ್ ಮೇಲ್ಮಟ್ಟದ ಮಾಹಿತಿಗಳ ಆದಾರದಲ್ಲಿ ರಕ್ತಕಾರಿ ಮೃತಪಟ್ಟಿದ್ದಾನೆ ಎಂದು ಉಲ್ಲೇಖಿಸಿರುವುದು ಸರಿಯಲ್ಲ. ಆತ ರಕ್ತ ಕಾರಿರುವ ಘಟನೆಯೇ ಆಗಿಲ್ಲ ಎಂಬುದು ಆತನ ಪೋಷಕರ, ನೆರಕರೆಯವರ ವಾದವಾಗಿದೆ. ಜನರ ವಿಶ್ವಾಸ ಗಳಿಸಿರುವ ಅಧಿಕಾರಿಗಳಾದ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ನಂಬಿಕೆ, ಕಾರ್ನಿಕಗಳ ಆಚೆಗೆ ವಸ್ತುನಿಷ್ಟ ತನಿಖೆ ನಡೆಸಿ ಕೊರಗಜ್ಜನ ಕ್ಷೇತ್ರ ಮಲಿನ ಪ್ರಕರಣದ ಹಿಂದಿರುವ ಸತ್ಯಗಳನ್ನು ಪೂರ್ಣವಾಗಿ ಹೊರ ತರಬೇಕು. ಆರೋಪಿಗಳು ದಿಢೀರ್ ತಪ್ಪೊಪ್ಪಿಗೆ ನೀಡಲು ಅಜ್ಜನ ಕ್ಷೇತ್ರಕ್ಕೆ ಆಗಮಿಸಿದುದರ ಹಿಂದೆ ಕಾಣದ ಕೈಗಳೇನಾದರು ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು. ರಾಜಕೀಯ ಶಕ್ತಿಗಳಿಗೆ ಕೈ ಆಡಿಸಲು ಅವಕಾಶ ನೀಡಬಾರದು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.







