ಕುಲಪತಿ ಸ್ಥಾನಕ್ಕಾಗಿ ಲಂಚ ಪ್ರಕರಣ: ಗಂಭೀರವಾಗಿ ಪರಿಗಣಿಸಲು ಸಿಎಫ್ಐ ಆಗ್ರಹ
ಮಂಗಳೂರು, ಎ.1: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಿಂದ 17.5 ಲಕ್ಷ ರೂ.ವನ್ನು ಪಡೆದು ಮೋಸ ಮಾಡಿದ ಪ್ರಕರಣದಲ್ಲಿ ರಾಮಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರನ ಬಂಧಿಸಲಾಗಿದ್ದರೂ ಇದರ ಹಿಂದೆ ಕಾಣದ ಕೈಗಳಿರುವ ಸಾಧ್ಯತೆ ಇದೆ. ಹಾಗಾಗಿ ಈ ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಸಿಎಫ್ಐ ಮಂಗಳೂರು ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನಗಳು ಲಂಚ ನೀಡಿದರೆ ಯಾರಿಗೂ ಸಿಗುತ್ತೆ ಎಂಬ ಆಘಾತಕಾರಿ ವಿಷಯ ಇದರಲ್ಲಿ ಅಡಗಿದೆ. ಲಂಚ ನೀಡಿ ಕುಲಪತಿ ಸ್ಥಾನಕ್ಕೆ ಮೊರೆಯಿಟ್ಟ ಪ್ರಾಧ್ಯಾಪಕ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಸ್ಥಾನಕ್ಕೆ ಕಳಂಕವಾಗಿದ್ದಾರೆ. ಹಾಗಾಗಿ ಅವರ ಮೇಲೆ ವಿಶ್ವವಿದ್ಯಾನಿಲಯವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳ ಹಿಂದಿರುವವರ ಮೇಲೆಯೂ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಸಿಎಫ್ಐ ದ.ಕ. ಜಿಲ್ಲಾಧ್ಯಕ್ಷ ಸಿರಾಜ್ ಒತ್ತಾಯಿಸಿದ್ದಾರೆ.





