ಭಾರತವನ್ನು ಹಿಂದೂರಾಷ್ಟ್ರವಾಗಿಸುವ ಆರೆಸ್ಸೆಸ್ ಯತ್ನ ಖಂಡಿಸಿ ನಿರ್ಣಯ ಕೈಗೊಂಡ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ

ಅಮೃತಸರ,ಎ.2: ಭಾರತದಲ್ಲಿ ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರನ್ನು ದಮನಿಸಲು ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ(ಎಸ್ಜಿಪಿಸಿ)ಯು,ದೇಶವನ್ನು ಹಿಂದು ರಾಷ್ಟ್ರವನ್ನಾಗಿ ಮಾಡಲು ಆರೆಸ್ಸೆಸ್ ನಡೆಸುತ್ತಿದೆ ಎನ್ನಲಾಗಿರುವ ಕ್ರಮಗಳನ್ನು ಖಂಡಿಸಿ ನಿರ್ಣಯವೊಂದನ್ನು ಅಂಗೀಕರಿಸಿದೆ.
ಆರೆಸ್ಸೆಸ್ನ ಪ್ರಯತ್ನಗಳನ್ನು ಜಾರಿಗೊಳಿಸಲು ಸನ್ನದ್ಧವಾಗಿರುವ ಬದಲು ಎಲ್ಲ ಧರ್ಮಗಳ ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಶ್ರಮಿಸುವಂತೆ ಕೇಂದ್ರ ಸರಕಾರಕ್ಕೂ ಕರೆ ನೀಡಿರುವ ನಿರ್ಣಯದಲ್ಲಿ,ಅಲ್ಪಸಂಖ್ಯಾತರನ್ನು ದಮನಿಸಲು ಪ್ರಯತ್ನಿಸುವ ಎಲ್ಲ ಶಕ್ತಿಗಳನ್ನು ದಂಡನೆಗೊಳಪಡಿಸಬೇಕು ಎಂದೂ ಹೇಳಲಾಗಿದೆ.
‘ಭಾರತವು ಬಹುಧಾರ್ಮಿಕ,ಬಹುಭಾಷಿಕ ಮತ್ತು ಬಹು-ಜನಾಂಗೀಯ ದೇಶವಾಗಿದೆ. ಪ್ರತಿಯೊಂದು ಧರ್ಮವೂ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾನ್ ಕೊಡುಗೆಯನ್ನು ಸಲ್ಲಿಸಿದೆ. ವಿಶೇಷವಾಗಿ ಸಿಖ್ ಸಮುದಾಯದ ಜನರು ಶೇ.80ಕ್ಕೂ ಹೆಚ್ಚು ತ್ಯಾಗಗಳನ್ನು ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ಈಗ ಸುಮಾರು ಸಮಯದಿಂದಲೂ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಆರೆಸ್ಸೆಸ್ ಯತ್ನದ ಹಿನ್ನೆಲೆಯಲ್ಲಿ ಇತರ ಧರ್ಮಗಳ ಧಾರ್ಮಿಕ ಸ್ವಾತಂತ್ರಗಳನ್ನು ಹತ್ತಿಕ್ಕಲಾಗುತ್ತಿದೆ. ನೇರ ಮತ್ತು ಪರೋಕ್ಷ ಹಸ್ತಕ್ಷೇಪದ ಮೂಲಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ’ಎಂದು ಮಾ.30ರಂದು ನಡೆದ ಎಸ್ಜಿಪಿಸಿಯ ವಾರ್ಷಿಕ ಮುಂಗಡಪತ್ರ ಅಧಿವೇಶನದಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಎಸ್ಜಿಪಿಸಿ ಅಧ್ಯಕ್ಷೆ ಬೀಬಿ ಜಾಗಿರ್ ಕೌರ್ ಅವರು ಈ ನಿರ್ಣಯವನ್ನು ಮಂಡಿಸಿದ್ದರು.
ಸಿಖ್ಖರು ಸೇರಿದಂತೆ ಹಲವಾರು ರೈತರು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಮತ್ತು ಫೆಬ್ರವರಿಯಲ್ಲಿ ಸಿಖ್ ಧಾರ್ಮಿಕ ಗುಂಪೊಂದು ಸಾಕಾ ನಾನಕಾನಾ ಸಾಹಿಬ್ನ ಶತಾಬ್ಧಿ ಆಚರಣೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ತಡೆದಿರುವ ಸಂದರ್ಭಲ್ಲಿ ಎಸ್ಜಿಪಿಸಿ ಈ ನಿರ್ಣಯವನ್ನು ಅಂಗೀಕರಿಸಿದೆ.
ಪಾಕಿಸ್ತಾನದ ಗುರುದ್ವಾರಾಕ್ಕೆ ಭೇಟಿ ನೀಡಲು ಸಿಖ್ ಜಾಥಾಕ್ಕೆ ಅನುಮತಿ ನಿರಾಕರಣೆ ಕುರಿತು ನಿರ್ಣಯವು ಭಾರತ ಸರಕಾರದ ಕ್ರಮಕ್ಕೂ ಬ್ರಿಟಿಷರು ಮತ್ತು ಮೊಗಲರ ಕ್ರಮಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಣ್ಣಿಸಿದೆ. ಸಿಖ್ ಸಮುದಾಯದ ಕ್ಷಮೆಯನ್ನು ಯಾಚಿಸುವಂತೆ ಅದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ,ಜ.26ರಂದು ದಿಲ್ಲಿಯಲ್ಲಿ ರೈತರ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ನವ್ರೀತ್ ಸಿಂಗ್ ಅವರ ಸಾವನ್ನು ಖಂಡಿಸಿ ಹಾಗೂ ಮೇ 1ರಂದು ಗುರು ತೇಗ್ ಬಹಾದೂರ್ ಅವರ 400ನೇ ಜನ್ಮ ದಿನಾಚರಣೆ ಅಂಗವಾಗಿ 2021ನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ವರ್ಷವನ್ನಾಗಿ ಘೋಷಿಸುವಂತೆ ವಿಶ್ವಸಂಸ್ಥೆಯನ್ನ ಕೋರುವ ನಿರ್ಣಯಗಳನ್ನೂ ಅಂಗೀಕರಿಸಲಾಗಿದೆ.
ಗುರುದ್ವಾರ ಕರ್ತಾರಪುರ ಸಾಹಿಬ್ ಕಾರಿಡಾರ್ನ ಪುನರಾರಂಭಕ್ಕೆ ಕೋರಿಯೂ ನಿರ್ಣಯವನ್ನು ಕೈಗೊಳ್ಳಲಾಗಿದೆ.







