ಸಂತ್ರಸ್ತೆಯ ಹೇಳಿಕೆ ರದ್ದು ಕೋರಿ ಅರ್ಜಿ: ಎಸ್ಐಟಿ, ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಎ.5: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ತಂದೆ ತಮ್ಮ ಮಗಳು ನೀಡಿರುವ ಹೇಳಿಕೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಗೃಹ ಇಲಾಖೆ ಹಾಗೂ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಪ್ರಕರಣದ ಸಂತ್ರಸ್ತ ಯುವತಿಯ ತಂದೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗೃಹ ಇಲಾಖೆ ಹಾಗೂ ಎಸ್ಐಟಿಗೆ ನೋಟಿಸ್ ಜಾರಿ ಮಾಡಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ಕೋರ್ಟ್ ಕಚೇರಿ ಎತ್ತಿರುವ ಆಕ್ಷೇಪಣೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಮ್ಯಾಜಿಸ್ಟ್ರೇಟ್ ಅವರು ಸಿಆರ್ಪಿಸಿ ಸೆಕ್ಷನ್ 164ರ ಅಡಿ ಯುವತಿಯ ಹೇಳಿಕೆ ದಾಖಲಿಸಿಕೊಂಡಿರುವ ಪ್ರತಿ ನ್ಯಾಯಾಲಯದಲ್ಲಿಯೇ ಇದೆ. ಆ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಿಲ್ಲ ಎಂದು ಕಚೇರಿ ಆಕ್ಷೇಪಣೆ ಎತ್ತಿದೆ. ಆದರೆ, ದೋಷಾರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಆ ಹೇಳಿಕೆಯನ್ನು ನ್ಯಾಯಾಲಯದಿಂದ ಹೊರತರಲು ಸಾಧ್ಯವಿಲ್ಲ. ಹೀಗಾಗಿ ಹೇಳಿಕೆ ಪ್ರತಿಯನ್ನು ಸಲ್ಲಿಸಲು ವಿನಾಯಿತಿ ನೀಡಬೇಕು ಎಂದು ಸಂತ್ರಸ್ತ ಯುವತಿ ತಂದೆ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ಪೀಠ, ಸಿಆರ್ಪಿಸಿ ಸೆಕ್ಷನ್ 164ರಡಿ ದಾಖಲಾಗಿರುವ ಹೇಳಿಕೆ ಸಲ್ಲಿಸಲು ತಾತ್ಕಾಲಿಕ ವಿನಾಯಿತಿ ನೀಡಿತು. ಜತೆಗೆ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ, ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ: ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ಪಿಸಿ ಸೆಕ್ಷನ್ 164ರ ಅಡಿ ತಮ್ಮ ಪುತ್ರಿಯ ಹೇಳಿಕೆ ದಾಖಲಿಸಿದ್ದಾರೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಿರುವ ಕ್ರಮ ಸರಿಯಲ್ಲ. ಹಾಗೆಯೇ ರಾಜಕೀಯ ಕಾರಣಗಳಿಗಾಗಿ ಆಕೆಯನ್ನು ದಾಳವಾಗಿಸಿಕೊಳ್ಳಲಾಗಿದೆ. ಹೀಗೆ ಒತ್ತಡದಲ್ಲಿ ಪುತ್ರಿ ನೀಡಿರುವ ಹೇಳಿಕೆಯನ್ನು ರದ್ದುಪಡಿಸಬೇಕು ಎಂದು ಯುವತಿಯ ತಂದೆ ಕೋರಿದ್ದಾರೆ.







