‘ಗೆಲುವಿನ ಹೆಜ್ಜೆ ಪುಸ್ತಕ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ’

ಉಡುಪಿ, ಎ.5: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ತರಗತಿಗಳು ಕೋವಿಡ್ ಕಾರಣ ದಿಂದಾಗಿ 7 ತಿಂಗಳು ವಿಳಂಬವಾಗಿ ಆರಂಭವಾಗಿದೆ. ಆದ್ದರಿಂದ ಎಲ್ಲಾ ವಿಷಯಗಳಿಗೆ ಸರಳ ಅಧ್ಯಯನ ಕ್ರಮವನ್ನು ಅನುಸರಿಸಿ ನಿಧಾನಗತಿ ವಿದ್ಯಾರ್ಥಿಗಳು ಓದಿ ಕಲಿತು ಪರೀಕ್ಷೆ ಪಾಸಾಗಲು ಯೋಗ್ಯವಾಗಿರುವ 280 ಪುಟಗಳ ‘ಗೆಲುವಿನ ಹೆಜ್ಜೆ’ ಪುಸ್ತಕ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಗೆಲುವಿನ ಹೆಜ್ಜೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತಿದ್ದರು.
ಎಸೆಸೆಲ್ಸಿಯಲ್ಲಿ ನಿಧಾನಗತಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆ ಪುಸ್ತಕ ನೀಡಲಾಗುತ್ತದೆ. ಈ ಪುಸ್ತಕದ ಉದ್ದೇಶ ಕಲಿಯಲು ಹಿಂದುಳಿದ ವಿದ್ಯಾರ್ಥಿಗಳನ್ನು ಮುಂದೆ ತರುವಂತಹ ಪ್ರಯತ್ನ ಹಾಗೂ ಅವರು ಪರೀಕ್ಷೆ ಉತ್ತೀರ್ಣರಾಗುವ ಸದುದ್ದೇಶದಿಂದ ಈ ಪುಸ್ತಕ ಸಿದ್ಧ ಪಡಿಸಲಾಗಿದೆ ಎಂದು ಹೇಳಿದರು.
ಶಿಕ್ಷಕರು ಈ ಪುಸ್ತಕವನ್ನು ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಬಳಕೆ ಮಾಡಬೇಕು. ಪಿಯುಸಿ ವಿದ್ಯಾರ್ಥಿಗಳಿಗೂ ಇದೇ ರೀತಿಯಾದ ಪುಸ್ತಕ ಹೊರತರುವಂತಹ ಪ್ರಯತ್ನ ಮಾಡಿದ್ದು, ಪುಸ್ತಕ ಮುದ್ರಣ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅದನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದರು.
ಪುಸ್ತಕ ಮುದ್ರಣಕ್ಕೆ ಅನುದಾನ ನೀಡಿ ಸಹಕರಿಸಿದ ಉದ್ಯಮಿ ನಾಡೋಜ ಜಿ.ಶಂಕರ್ ಅವರು 3000 ಪ್ರತಿಗಳನ್ನು ಮುದ್ರಿಸಿ, ಮಕ್ಕಳ ಕಲಿಕೆಗಾಗಿ ನೀಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಜಿ.ಶಂಕರ್ರನ್ನು ಸನ್ಮಾನಿಸಲಾಯಿತು. ಡಾ.ಜಿ.ಶಂಕರ್ ಮಾತನಾಡಿ, ಬಡವರ ಮಕ್ಕಳಿಗೆ ಈ ಗೆಲುವಿನ ಹೆಜ್ಜೆ ಪುಸ್ತಕ ಪ್ರೇರಣೆಯಾಗಲಿ. ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಈ ಪುಸ್ತಕ ಸಹಕಾರಿಯಾಗಲಿದೆ. ಈ ಪುಸ್ತಕ ಮುಂದಿನ ಮಕ್ಕಳಿಗೆ ಪ್ರೇರಣೆಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಎನ್.ಎಚ್.ನಾಗೂರ, ವೇದಮೂರ್ತಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಎಸೆಸೆಲ್ಸಿ ವಿದ್ಯಾರ್ಥಿಗಳು ಉಪಸ್ಥಿತರಿ ದ್ದರು. ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆ ಪುಸ್ತಕ ವಿತರಿಸಲಾಯಿತು.








