ಕೊರೋನ ಯೋಧರಿಗೆ ಧನ್ಯವಾದ ತಿಳಿಸಲು ಸಾವಿರಾರು ಕಿ.ಮೀ. ನಡೆದ ಮೈಸೂರಿನ ಭರತ್

ಮೈಸೂರು,ಎ.8: ಕೊರೋನ ಯೋಧರಿಗೆ ಧನ್ಯವಾದ ತಿಳಿಸಲು, ಜನರಿಗೆ ವಿವಿಧ ಸಂಗತಿಗಳ ಬಗ್ಗೆ ಅರಿವು ಮೂಡಿಸಲು ಮೈಸೂರಿನ ಭರತ್ ಎಂಬಾತ ಸುಮಾರು 4 ಸಾವಿರ ಕಿ.ಮೀ. ನಡೆದು ಈಗ ಮೈಸೂರಿಗೆ ಮರಳಿದ್ದಾರೆ.
ಮೈಸೂರಿನವರೇ ಆದ ಭರತ್ ಕೊರೋನ ಯೋಧರಿಗೆ ವಿಶಿಷ್ಟವಾಗಿ ಧನ್ಯವಾದ ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 11ರಂದು ಮೈಸೂರಿನಿಂದ ತಮ್ಮ ಪಯಣ ಆರಂಭಿಸಿದ್ದರು. ರಾಷ್ಟ್ರೀಯ ಹೆದ್ದಾರಿಯ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿದರು. ಕಾಲ್ನಡಿಗೆಯಲ್ಲೇ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೆ ದಾರಿಯುದ್ದಕ್ಕೂ 140ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಶಾಲೆ, ಕಾಲೇಜುಗಳಿಗೆ ತೆರಳಿ ಮಕ್ಕಳೊಂದಿಗೆ ಮಾತನಾಡಿದ್ದಾರೆ. ಆಯಾ ಸ್ಥಳಗಳಲ್ಲಿ ಸಿಗುವ ಆಹಾರ ಸೇವಿಸಿ ದೇವಸ್ಥಾನ, ಗುರುದ್ವಾರ, ಫುಟ್ಪಾತ್ಗಳಲ್ಲಿ ಮಲಗಿದ್ದಾರೆ.
ಇದೀಗ ಭರತ್ ತವರಿಗೆ ಮರಳಿದ್ದಾರೆ. 3 ತಿಂಗಳು, 9 ದಿನಗಳಲ್ಲಿ 4 ಸಾವಿರ ಕಿ.ಮೀ. ಸಂಚರಿಸಿರುವ ಭರತ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ.





