ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಅಡ್ಡಿಪಡಿಸಿದರೆ ಗಂಭೀರ ಕ್ರಮ: ಸಾರಿಗೆ ಸಚಿವ ಸವದಿ ಎಚ್ಚರಿಕೆ

ಬೆಂಗಳೂರು, ಎ.9: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಲವು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಜನ ಸೇವೆಗೆ ಸ್ಪಂದಿಸಲು ಮುಂದಾಗುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲವು ಕಾರ್ಮಿಕ ಮುಖಂಡರೊಂದಿಗೆ ಸೇರಿ ಬೆದರಿಕೆ ಒಡ್ಡುತ್ತಾ ಅವರ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಇಂಥ ಕೃತ್ಯಕ್ಕೆ ಮುಂದಾಗುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲಕ್ಷ್ಮಣ ಸವದಿ ಅವರು, ಬಹುತೇಕ ಸಾರಿಗೆ ನೌಕರರಿಗೆ ತಮ್ಮ ವೇತನ ಹೆಚ್ಚಳವಾದರೆ ಸಾಕು, ಈ ಮುಷ್ಕರವಾಗಲೀ ಅಥವಾ ವೇತನ ಆಯೋಗದ ಶಿಫಾರಸ್ಸುಗಳ ಜಾರಿಯಾಗಲಿ ಅವಶ್ಯವಿಲ್ಲ ಎಂಬ ಮನೋಭಾವನೆಯಿಂದ ಸ್ವಯಂ ಪ್ರೇರಿತರಾಗಿ ಕರ್ತವ್ಯ ನಿರ್ವಹಿಸಲು ಮುಂದಾಗುತ್ತಿದ್ದಾರೆ.
ಆದರೆ ಈ ಮುಷ್ಕರವನ್ನೇ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದವರು ಇವರಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಇಂಥ ಕಾನೂನು ವಿರೋಧಿ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಕರೆಗೆ ಓಗುಟ್ಟು ಯಾರೇ ಕರ್ತವ್ಯಕ್ಕೆ ಹಾಜರಾದರೂ ಅಂತಹವರಿಗೆ ಸೂಕ್ತ ರಕ್ಷಣೆ ಕಲ್ಪಿಸುವುದು ನಮ್ಮ ಸರಕಾರದ ಹೊಣೆಯಾಗಿದೆ. ಹೀಗಾಗಿ, ಈ ಬಗ್ಗೆ ಯಾರೂ ಅಂಜಿಕೆ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ಸರಕಾರದ ಪದೇ ಪದೇ ವಿನಂತಿಸಿಕೊಂಡಿದ್ದರೂ ಸಹ ಸಾರಿಗೆ ನೌಕರರ ಮುಷ್ಕರ ಮೂರನೆಯ ದಿನಕ್ಕೂ ಮುಂದುವರಿದು ರಾಜ್ಯಾದ್ಯಂತ ಅಸಂಖ್ಯಾತ ಪ್ರಯಾಣಿಕರಿಗೆ ತೊಂದರೆಯಾಗಿರುವುದು ತೀರಾ ಬೇಸರದ ಬೆಳವಣಿಗೆಯಾಗಿದೆ. ನಾಡಿನಾದ್ಯಂತ ಈ ಮುಷ್ಕರದಿಂದ ಸಾರ್ವಜನಿಕರೂ ಬೇಸತ್ತು ಮುಷ್ಕರ ನಿರತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಮುಷ್ಕರವನ್ನು ತಕ್ಷಣ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಲು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಮಾಡುವ ವಿಚಾರದಲ್ಲಿ ಸರಕಾರ ಮೀನಮೇಷ ನಡೆಸುತ್ತಿಲ್ಲ. ಪ್ರಸ್ತುತ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ಈ ಬಗ್ಗೆ ಚುನಾವಣಾ ಆಯೋಗದ ಅನುಮತಿಗಾಗಿ ಸ್ವಲ್ಪ ಕಾಯುವುದು ಅನಿವಾರ್ಯವಾಗಿದೆ. ಆದರೆ ಈ ಅಂಶವನ್ನೂ ತಪ್ಪಾಗಿ ಬಿಂಬಿಸಿ ಮುಗ್ಧ ಸಾರಿಗೆ ನೌಕರರನ್ನು ಹಾದಿ ತಪ್ಪಿಸಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಹುನ್ನಾರವನ್ನು ಕೆಲವರು ನಡೆಸುತ್ತಿರುವುದು ವಿಷಾದನೀಯ. ಅಷ್ಟೇ ಅಲ್ಲ, ಸಾರಿಗೆ ನಿಗಮಗಳಿಗೆ ಸಂಬಂಧವೇ ಇಲ್ಲದವರು ಸಾರಿಗೆ ನೌಕರರ ಮನಸ್ಸಿನಲ್ಲಿ ಸರಕಾರದ ಬಗ್ಗೆ ಹುಳಿ ಹಿಂಡುತ್ತಾ ಸ್ವಯಂ ಘೋಷಿತ ಮುಖಂಡರಾಗಲು ಹವಣಿಸುತ್ತಿದ್ದಾರೆ. ಇಂಥವರ ಬಗ್ಗೆ ನಮ್ಮ ನೌಕರ ಬಾಂಧವರು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದ್ದಾರೆ.
ಆದರೆ ಇಷ್ಟೆಲ್ಲಾ ಕುತಂತ್ರ-ಪ್ರಚೋದನೆಗಳ ನಡುವೆಯೂ ಕಳೆದೆರಡು ದಿನಗಳಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳ ಸಾವಿರಾರು ಬಸ್ಸುಗಳು ಸಂಚರಿಸಲು ಧೈರ್ಯದಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಂಥ ನಮ್ಮ ಕೆಲವು ಸಾರಿಗೆ ಸಿಬ್ಬಂದಿಗಳ ಸೇವಾಮನೋಭಾವವನ್ನು ನಾನು ಮುಕ್ತ ಕಂಠದಿಂದ ಪ್ರಶಂಸಿಸುತ್ತೇನೆ ಎಂದಿದ್ದಾರೆ.
ಇದೇ ರೀತಿ ನಮ್ಮ ಮನವಿಗೆ ಓಗುಟ್ಟು ಖಾಸಗಿ ವಾಹನ ಮಾಲಕರೂ ತಮ್ಮ ಬಸ್ಸು, ಮ್ಯಾಕ್ಸಿ ಕ್ಯಾಬ್, ಮತ್ತಿತರ ವಾಹನಗಳ ಸೇವೆಯನ್ನು ವ್ಯಾಪಕವಾಗಿ ಒದಗಿಸಿಕೊಟ್ಟು ಸಾರ್ವಜನಿಕರಿಗೆ ಸ್ಪಂದಿಸಿರುವುದು ಸಹ ಶ್ಲಾಘನೀಯ. ಇದೇ ರೀತಿ ಮುಂದೆಯೂ ಅವರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದರು.
ವಾಹನಗಳ ದಾಖಲಾತಿ ಸಿಂಧುತ್ವ ವಿಸ್ತರಣೆ: ಈ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೋಟಾರು ವಾಹನಗಳ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರಡಿಯಲ್ಲಿ ವಿತರಿಸಿರುವ ಎಲ್ಲ ತರಹದ ದಾಖಲಾತಿಗಳ ಪೈಕಿ, 2020ರ ಫೆ.1ರಿಂದ ಸಿಂಧುತ್ವ ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತಗೊಳಿಸಿ ಸಿಂಧುತ್ವದ ಅವಧಿಯನ್ನು 2021ರ ಜೂ.30ರವರೆಗೆ ವಿಸ್ತರಿಸಲಾಗಿದೆ ಎಂದಿದ್ದಾರೆ.
ವದಂತಿಗಳಿಗೆ ಕಿವಿಕೊಡದೆ ಕರ್ತವ್ಯಕ್ಕೆ ಹಾಜರಾಗಿ
‘ನಮ್ಮ ಸಾರಿಗೆ ನೌಕರ ಬಾಂಧವರು ಯಾವುದೇ ವದಂತಿಗಳಿಗೆ ಕಿವಿಕೊಡದೆ ಮತ್ತು ಪ್ರಚೋದನೆಗೆ ಒಳಗಾಗದೆ ಮುಷ್ಕರವನ್ನು ಕೈಬಿಟ್ಟು ಕೂಡಲೇ ಕರ್ತವ್ಯಕ್ಕೆ ಮರಳುವ ಮೂಲಕ ಸಾರಿಗೆ ನಿಗಮಗಳ ಘನತೆ ಗೌರವಗಳನ್ನು ಮತ್ತಷ್ಟು ಹೆಚ್ಚಿಸುವಂತಾಗಲಿ ಎಂದು ಮತ್ತೊಮ್ಮೆ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.’
-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ







