ಜೋಕ್ಲೆಗಾದ್ ತುಳು ನಡಕೆ: ಕುತ್ಯಾರು ಶಾಲಾ ತಂಡಕ್ಕೆ ಸಮಗ್ರ ಪ್ರಶಸ್ತಿ
ಶಿರ್ವ, ಎ.10: ಉಡುಪಿ ತುಳುಕೂಟ ವತಿಯಿಂದ ಶಿರ್ವ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಶಿರ್ವ ಪದವು ಹಿಂದೂ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜೋಕ್ಲೆಗಾದ್ ತುಳು ನಡಕೆ ವಿವಿಧ ಸ್ಫರ್ಧಾ ಕಾರ್ಯಕ್ರಮದಲ್ಲಿ ಕುತ್ಯಾರು ವಿದ್ಯಾದಾಯಿನಿ ಶಾಲಾ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ದ್ವಿತೀಯ ಸ್ಥಾನವನ್ನು ಉಡುಪಿಯ ಬಾಲಕಿಯರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಗೆದ್ದುಕೊಂಡಿದೆ. ತುಳು ರಂಗಭೂಮಿ ನಟ ಮರ್ವಿನ್ ಶಿರ್ವ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಸಂಚಾಲಕ ದಯಾನಂದ ಕೆ.ಶೆಟ್ಟಿ ದೆಂದೂರು ಅಧ್ಯಕ್ಷತೆ ವಹಿಸಿದ್ದರು.
ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ, ಕಾಪು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ, ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ನ ರಾಘವೇಂದ್ರ ನಾಯಕ್, ಕಳತ್ತೂರು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮುಹಮ್ಮದ್ ಫಾರೂಕ್, ಸಂಚಾಲಕ ದಿವಾಕರ್ ಡಿ.ಶೆಟ್ಟಿ, ಇಂದ್ರಾಳಿ ಜೆಸಿಐ ಉಪಾಧ್ಯಕ್ಷ ಅಶೋಕ್ ಶೇರಿಗಾರ್, ಗುಣವತಿ ದಯಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಉಡುಪಿ ತುಳುಕೂಟದ ಪದಾಧಿಕಾರಿ ಯಶೋಧಾ ಕೇಶವ್ ಸ್ವಾಗತಿಸಿದರು. ಉಪನ್ಯಾಸಕಿ ಲಕ್ಷ್ಮೀ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಾ.ವಿ.ಕೆ.ಯಾದವ್ ವಂದಿಸಿದರು.