ಕೊರೋನ ಪರಿಣಾಮ ಎದುರಿಸಲು ಬಡ ಜನತೆಯ ಕೈಗೆ ಹಣ ನೀಡಬೇಕು: ರಾಹುಲ್ ಗಾಂಧಿ
ಸೊಕ್ಕಿನ ಸರಕಾರಕ್ಕೆ ಉತ್ತಮ ಸಲಹೆ ಅಂದರೆ ಅಲರ್ಜಿ
ಹೊಸದಿಲ್ಲಿ: ಕೊರೋನ ವೈರಸ್ ನ ಎರಡನೇ ಅಲೆಯ ಪರಿಣಾಮವನ್ನು ಎದುರಿಸಲು ಸಾಮಾನ್ಯ ಜನರ ಕೈಗೆ ಹಣ ನೀಡಬೇಕು ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸೊಕ್ಕಿನ ಸರಕಾರಕ್ಕೆ ಉತ್ತಮ ಸಲಹೆಯೆಂದರೆ ಅಲರ್ಜಿ ಇದೆ ಎಂದು ಆರೋಪಿಸಿದ್ದಾರೆ.
ಸರಕಾರವು ವಾಕ್ಚಾರ್ತುಯದಲ್ಲಿ ಭಾಗವಹಿಸುವ ಬದಲು ಜನರಿಗೆ ಉದ್ಯೋಗ ಹಾಗೂ ಲಸಿಕೆಗಳನ್ನು ನೀಡಬೇಕೆಂದರು.
ಕೇಂದ್ರ ಸರಕಾರದ ವಿಫಲ ನೀತಿಗಳು ಕೊರೋನ ವೈರಸ್ ನ ಭಯಾನಕ ಎರಡನೇ ಅಲೆಗೆ ಕಾರಣವಾಗಿವೆ ಹಾಗೂ ವಲಸೆ ಕಾರ್ಮಿಕರು ಮತ್ತೆ ವಲಸೆ ಹೋಗುವಂತೆ ಮಾಡಿವೆ" ಎಂದು ರಾಹುಲ್ ಹಿಂದಿಯಲ್ಲಿ ಮಾಡಿದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
"ವ್ಯಾಕ್ಸಿನೇಷನ್ ಹೆಚ್ಚಿಸುವುದರ ಜೊತೆಗೆ ಸಾಮಾನ್ಯ ಜನರ ಜೀವನ ಮತ್ತು ದೇಶದ ಆರ್ಥಿಕತೆಗಾಗಿ ಜನರ ಕೈಯಲ್ಲಿ ಹಣವನ್ನು ನೀಡುವುದು ಮುಖ್ಯ.. ಆದರೆ ಈ ಸೊಕ್ಕಿನ ಸರಕಾರಕ್ಕೆ ಉತ್ತಮ ಸಲಹೆಗಳೆಂದರೆ ಅಲರ್ಜಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶನಿವಾರ ಕಾಂಗ್ರೆಸ್ ಆಡಳಿತದ ರಾಜ್ಯಗಳೊಂದಿಗಿನ ಪರಿಶೀಲನಾ ಸಭೆಯಲ್ಲಿ ರಾಹುಲ್ ಗಾಂಧಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಬಡವರಿಗೆ ಹಣವನ್ನು ನೀಡಬೇಕೆಂದು ಸೂಚಿಸಿದರು.