ಕೊರೋನ ರಾತ್ರಿ ಕರ್ಫ್ಯೂ: ಉಡುಪಿ, ಮಣಿಪಾಲ ಸಂಪೂರ್ಣ ಸ್ತಬ್ಧ

ಉಡುಪಿ, ಎ.11: ಹೆಚ್ಚುತ್ತಿರುವ ಕೊರೋನ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರಕಾರ ವಿಧಿಸಿದ್ದ ಕೊರೋನಾ ರಾತ್ರಿ ಕರ್ಫ್ಯೂ ಹಿನ್ನೆಲೆ ಯಲ್ಲಿ ಉಡುಪಿ ನಗರ ಮತ್ತು ಮಣಿಪಾಲ ಎ.10ರಂದು ರಾತ್ರಿ 10 ಗಂಟೆ ಯಿಂದ ಬಹುತೇಕ ಸ್ತಬ್ಧಗೊಂಡಿತ್ತು.
ಕರ್ಫ್ಯೂ ಹಿನ್ನೆಲೆಯಲ್ಲಿ ಮಲ್ಪೆ, ಉಡುಪಿ ನಗರದ ಬನ್ನಂಜೆ, ಕಲ್ಸಂಕ ಸರ್ಕಲ್, ಮಣಿಪಾಲ ಸಿಂಡಿಕೇಟ್ ಸರ್ಕಲ್ ಮತ್ತು ಪರ್ಕಳ ಸಮೀಪ ಚೆಕ್ಪೋಸ್ಟ್ ಗಳನ್ನು ನಿರ್ಮಿಸಿ ಪೊಲೀಸರು ಪ್ರತಿ ವಾಹನಗಳನ್ನು ತಪಾಸಣೆ ನಡೆಸಿದರು. ಪೊಲೀಸರು ಮಲ್ಪೆ, ಮಣಿಪಾಲ, ಉಡುಪಿ ನಗರ ದಲ್ಲಿ ಪೊಲೀಸರು ಅಂಗಡಿ, ಹೊಟೇಲ್ಗಳಿಗೆ ಬಂದ್ ಮಾಡುವಂತೆ ಮತ್ತು ಸಾರ್ವಜನಿಕರು ಮನೆ ಸೇರುವಂತೆ ಸೂಚನೆ ನೀಡಿದರು.
ರಾತ್ರಿ ಕಲ್ಸಂಕ ಹಾಗೂ ಮಣಿಪಾಲ ಚೆಕ್ಪೋಸ್ಟ್ಗೆ ಆಗಮಿಸಿದ್ದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗೆ ಇಳಿದ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿದರು. ಅದೇ ರೀತಿ ಉಡುಪಿ ಜಿಲ್ಲಾ ಎಸ್ಪಿ ವಿಷ್ಣು ವರ್ದನ್ ಕಲ್ಸಂಕ, ಮಣಿಪಾಲ, ಪರ್ಕಳ ಚೆಕ್ ಪೋಸ್ಟ್ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಬಹುತೇಕ ಅಂಗಡಿ ಮುಗ್ಗಟ್ಟುಗಳು ರಾತ್ರಿ 10ಗಂಟೆಯೊಳಗೆ ಬಂದ್ ಆಗಿದ್ದವು. ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ ವೇಳೆ ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ಬಾರ್ಗಳು ಬಂದ್ ಆಗಿರುವುದರಿಂದ ವೈನ್ಶಾಪ್ಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡುಬಂದರು. ಹೋಟೆಲ್ಗಳಿಗೆ 9.30ರೊಳಗೆ ಬಂದ್ ಮಾಡುವಂತೆ ಪೊಲೀಸರು ಗಡುವು ನೀಡಿದ್ದರು. ಅದರಂತೆ ಮಣಿಪಾಲ ಹಾಗೂ ಉಡುಪಿಯಲ್ಲಿ ಬಹುತೇಕ ಹೊಟೇಲ್ ಗಳು 10ಗಂಟೆಗೆ ಮೊದಲೇ ಬಂದ್ ಆಗಿರುವುದಾಗಿ ತಿಳಿದುಬಂದಿದೆ.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಣಿಪಾಲ ಹಾಗೂ ಉಡುಪಿ ನಗರದ ರಸ್ತೆಗಳು ವಾಹನ ಹಾಗೂ ಜನ ಸಂಚಾರ ಇಲ್ಲದೆ ಬೀಕೋ ಎನ್ನುತ್ತಿದ್ದವು. ಎಲ್ಲ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಮಣಿಪಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ಸಂಪೂರ್ಣ ಬಂದ್ ಆಗಿತ್ತು. ಬಾರ್, ಹೊಟೇಲ್ ಹಾಗೂ ಅಂಗಡಿ ಮಾಲಕರು ಸರಕಾರದ ಆದೇಶಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಅನಗತ್ಯವಾಗಿ ಓಡಾಟ ನಡೆಸಿದ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಒಟ್ಟು 5 ಚೆಕ್ಪೋಸ್ಟ್, 5 ಪಿಕೇಟಿಂಗ್ ಪಾಯಿಂಟ್, ನಾಲ್ಕು ಸೆಕ್ಟರ್ ಪ್ಯಾಟ್ರೋಲಿಂಗ್ಗಳಿದ್ದವು.
-ವಿಷ್ಣುವರ್ಧನ್, ಎಸ್ಪಿ, ಉಡುಪಿ








