ವಸಂತಿ ಆರ್. ಭಟ್ಗೆ ‘ನಿಡಂಬೂರು ಶ್ರೀ’ ಪ್ರಶಸ್ತಿ ಪ್ರದಾನ

ಉಡುಪಿ, ಎ.12: ನಿಡಂಬೂರು ಮಾಗಣೆಯ ಶ್ರೇಷ್ಠ ಸಾಧಕರಿಗೆ ನೀಡಲಾಗುವ ‘ನಿಡಂಬೂರು ಶ್ರೀ’ ಪ್ರಶಸ್ತಿಯನ್ನು ಈ ಬಾರಿ ಕಿದಿಯೂರಿನ ಖ್ಯಾತ ವಯಲಿನ್ ವಾದಕಿ ವಿದ್ವಾನ್ ವಸಂತಿ ರಾಮ ಭಟ್ ಇವರಿಗೆ ರವಿವಾರ ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆದ ಮಧೂರು ಮಾಧುರ್ಯ ಸಮಾರಂಭದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಸಂತಿ ರಾಮ ಭಟ್ ನೂರಾರು ವಿದ್ಯಾರ್ಥಿಗಳಿಗೆ ಬಹಳ ಪ್ರೀತಿಯಿಂದ ವಯಲಿನ್ ವಿದ್ಯೆಯನ್ನು ಕಲಿಸಿ ಅವರನ್ನು ಕಲಾವಿದರನ್ನಾಗಿಸಿ ಸಮಾಜಕ್ಕೆ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಸ್ವತಃ ಶ್ರೇಷ್ಠ ವಯಲಿನ್ ವಾದಕಿಯಾಗಿರುವ ವಸಂತಿ ಭಟ್, ನಮ್ಮ ನಿಡಂಬೂರು ಮಾಗಣೆ ಹೆಮ್ಮೆ ಪಡುವ ಸಾಧಕಿ. ಈ ಬಾರಿಯ ನಿಡಂಬೂರು ಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದು ಪ್ರಶಸ್ತಿ ಪ್ರದಾನ ಮಾಡಿದ ನಿಡಂಬೂರುಬೀಡು ವಿಜಯ ಬಲ್ಲಾಳ ನುಡಿದರು.
ಈ ಸಂದರ್ಭದಲ್ಲಿ ಡಾ. ಅರ್ಜುನ್ ಬಲ್ಲಾಳ್, ಡಾ.ಶ್ರುತಿ ಅರ್ಜುನ್ ಬಲ್ಲಾಳ, ವಿದ್ವಾನ್ ಮಧ್ವೇಶ ಭಟ್ ಹಾಗೂ ಜ್ಯೋತಿ ಸತೀಶ್ ಭಟ್ ಉಪಸ್ಥಿತರಿದ್ದರು. ಕಳೆದ ಬಾರಿ ಈ ಪ್ರಶಸ್ತಿಯನ್ನು ಅಂಬಲಪಾಡಿಯ ಹಿರಿಯ ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ನೀಡಲಾಗಿತ್ತು.





