ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ಎ. 21ರಂದು ದಿಲ್ಲಿಗೆ ರ್ಯಾಲಿ

ಲುಧಿಯಾನ, ಎ. 14: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸುವ ಪ್ರಯತ್ನವಾಗಿ ರೈತರು, ಹೋರಾಟಗಾರರು ಹಾಗೂ ಮಹಿಳೆಯರು ಎಪ್ರಿಲ್ 21ರಂದು ದಿಲ್ಲಿಗೆ ರ್ಯಾಲಿ ನಡೆಸಲು ನಡೆಸಲು ನಿರ್ಧರಿಸಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟ (ಏಕ್ತಾ ಉಗ್ರಹಾನ್) ಬಥಿಂಡಾದ ತಲ್ವಾಂಡಿ ಸಾವೋದಲ್ಲಿ ಕರೆದ ಬೈಸಾಗಿ ಸಮಾವೇಶದಲ್ಲಿ ರೈತ ನಾಯಕರು ಈ ಘೋಷಣೆ ಮಾಡಿದ್ದಾರೆ. ಜಲಿಯನ್ವಾಲಾಬಾಗ್ ಹುತಾತ್ಮರಿಗೆ ಅರ್ಪಿಸಲಾದ ಹಾಗೂ ‘ಖಾಲ್ಸಾ ಸಾಜ್ನಾ ದಿವಸ್’ನ ನೆನಪಿಗಾಗಿ ಆಯೋಜಿಸಲಾದ ಈ ಸಮಾವೇಶದಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರು.
ತಲ್ವಾಂಡಿ ಸಾಬೋ ಅಲ್ಲದೆ, ಪಂಜಾಬ್ನಾದ್ಯಂತ ಇತರ 38 ಸ್ಥಳಗಳಲ್ಲಿ ವಿವಾದಾತ್ಮಕ ಕಾಯ್ದೆ ವಿರುದ್ಧ ಬೈಸಾಕಿ ಸಮಾವೇಶ ನಡೆಸಲಾಯಿತು.
ಎಪ್ರಿಲ್ 21ರ ದಿಲ್ಲಿ ರ್ಯಾಲಿಯ ನೇತೃತ್ವವನ್ನು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಖ್ದೇವ್ ಸಿಂಗ್ ಕೊಕ್ರಿಕಾಲನ್ ಹಾಗೂ ರಾಜ್ಯ ಕೋಶಾಧಿಕಾರಿ ಝಂಡಾ ಸಿಂಗ್ ಜೇಟುಕೆ ವಹಿಸಲಿದ್ದಾರೆ.
ಕೇಂದ್ರ ಸರಕಾರದ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಒಕ್ಕೂಟ ಹೇಳಿದೆ.
ಜಲಿಯನ್ವಾಲಾಬಾಗ್ ಹತ್ಯಾಕಾಂಡದ ಬಳಿಕ ಜನರು ಜಾತಿ, ಜನಾಂಗದ ತಾರತಮ್ಯದ ಕುರಿತು ಧ್ವನಿ ಎತ್ತಿದ್ದಾರೆ. ಬ್ರಿಟೀಷರ ವಿರುದ್ಧ ಸಂಘಟಿತರಾಗಿ ಹೋರಾಡಿದ್ದಾರೆ. ಈಗ ರೈತರು, ಕಾರ್ಮಿಕರು ಹಾಗೂ ಮಹಿಳೆಯರು ಕೃಷಿ ಕಾಯ್ದೆಗಳ ಕುರಿತಂತೆ ನರೇಂದ್ರ ಮೋದಿ ಸರಕಾರದ ವಿರುದ್ಧ ಹೋರಾಡಲಿದ್ದಾರೆ ಎಂದು ಬಿಕೆಯು ಹೇಳಿದೆ.