ಸ್ನಾನಕ್ಕೆಂದು ಕೆರೆಗೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು
ಮಡಿಕೇರಿ, ಎ.15: ಸ್ನಾನಕ್ಕೆಂದು ಕೆರೆಗೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೆರವನಾಡು ಗ್ರಾಮದ ಅಪ್ಪಂಗಳ ಪನ್ಯದಲ್ಲಿ ನಡೆದಿದೆ.
ಗ್ರಾಮದ ಮಂಡೀರ ಬೋಪಣ್ಣ ಎಂಬವರ ಗದ್ದೆಯಲ್ಲಿದ್ದ ಕೆರೆಗೆ ಈಜಲೆಂದು ತೆರಳಿದ ಉಮೇಶ್ ಹಾಗೂ ಕವಿತ ದಂಪತಿ ಪುತ್ರ ವಿವೇಕ್ (12) ಸಾವಿಗೀಡಾದ ಬಾಲಕ.
ವಿವೇಕ್ ತನ್ನ ಸ್ನೇಹಿತರಾದ ಕೃತಿಕ್ ಮತ್ತು ಸೋಮಶೇಖರ್ ಜೊತೆಗೆ ಸ್ನಾನಕ್ಕೆಂದು ಮಧ್ಯಾಹ್ನದ ಹೊತ್ತಿಗೆ ಕೆರೆಗೆ ತೆರಳಿದ್ದಾರೆ. ಈಜುವ ಸಂದರ್ಭ ವಿವೇಕ್ 10 ಅಡಿ ಆಳದಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಸಂದರ್ಭ ಜೊತೆಗಿದ್ದ ಸ್ನೇಹಿತರು ಗಾಬರಿಗೊಂಡು ಅಲ್ಲಿಂದ ತೆರಳಿದ್ದು ಪೋಷಕರಿಗೆ ವಿಷಯ ಹೇಳದೆ ಮರೆಮಾಚಿದ್ದಾರೆ ಎನ್ನಲಾಗಿದೆ.
ಬಳಿಕ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದಾಗ ವಿವೇಕ್ ಜೊತೆಗಿದ್ದ ಸ್ನೇಹಿತರು ನೈಜಾಂಶ ತಿಳಿಸಿದ್ದಾರೆ. ಬಳಿಕ ನುರಿತ ಈಜುಗಾರ ರವಿ ಮುತ್ತಪ್ಪ ಅವರನ್ನು ಕರೆಸಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.