ಸಜಿಪ ಮುನ್ನೂರು: ನೊಂದ ಕುಟುಂಬಕ್ಕೆ ಬೆಳದಿಂಗಳ ಆಸರೆ
ಮಂಗಳೂರು,ಎ.15: ಸಜಿಪಮುನ್ನೂರು ಗ್ರಾಮದ ಶಾಂತಿನಗರ ಮಿತ್ತಕಟ್ಟ ನಿವಾಸಿ ಲಲಿತಾ ಸೋಮಪ್ಪಅವರ ಮನೆಗೆ ಕಳೆದ ಶನಿವಾರ ಸಿಡಿಲು ಬಡಿದು ಭಾರೀ ನಷ್ಟ ಉಂಟಾಗಿದ್ದು, ಕುದ್ರೋಳಿಯ ‘ಗುರು ಬೆಳದಿಂಗಳು’ ಸಂಸ್ಥೆಯು ಸಕಾಲಕ್ಕೆ ಆರ್ಥಿಕ ನೆರವು ನೀಡಿ ಸಹಕರಿಸಿದೆ.
ಕೂಲಿ ಕೆಲಸ ಮಾಡುತ್ತಿದ್ದ ಲಲಿತಾ ಸೋಮಪ್ಪ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಎ.10ರಂದು ಈ ಮನೆಗೆ ಸಿಡಿಲು ಬಡಿದಿತ್ತು. ಇದರಿಂದ ಮನೆಯಲ್ಲಿದ್ದ ವಿದ್ಯುತ್ ಉಪಕರಣ, ಪೀಠೋಪಕರಣಗಳ ಸತ ಇತರ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಕೋಣೆಯೊಳಗೆ ಕಪಾಟಿಗೂ ಸಿಡಿಲು ಬಡಿದ ಪರಿಣಾಮ ಲಲಿತಾರ ಸಹೋದರಿಯ ಮದುವೆಗೆ ಇಟ್ಟಿದ್ದ ಚಿನ್ನಾಭರಣ ಕೂಡ ಸುಟ್ಟು ಹೋಗಿವೆ.ಈ ಬಗ್ಗೆ ಮಾಹಿತಿ ಪಡೆದ ಉದ್ಯಮಿ ನವೀನ್ ಸುವರ್ಣ ಅವರು ಕುದ್ರೋಳಿಯ ‘ಗುರು ಬೆಳದಿಂಗಳು’ ತಂಡಕ್ಕೆ ಮಾಹಿತಿ ನೀಡಿದರು. ಈ ಸಂಘಟನೆಯ ಸದಸ್ಯರು ತಾತ್ಕಾಲಿಕ ನೆಲೆಯಲ್ಲಿ 50 ಸಾವಿರ ರೂ. ನೆರವು ನೀಡಿದೆ.
ಈ ಸಂದರ್ಭ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಅಭಿವೃದ್ದಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ದೇವಳ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್., ಉದ್ಯಮಿ ನವೀನ್ ಸುವರ್ಣ, ಸತೀಶ್ ಗುರುಮಂದಿರ, ವಿವೇಕ್ ಕೋಟ್ಯಾನ್, ಯಶವಂತ್ ದೇರಾಜೆ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್ ಮತ್ತಿತರರಿದ್ದರು.