ಉಡುಪಿ: ಜಿಲ್ಲಾ ಲೈಸೆನ್ಸ್ ಸರ್ವೆಯರ್ ಸಂಘದಿಂದ ಮನವಿ

ಉಡುಪಿ, ಎ.16: ಸರ್ವೆ ವಿಭಾಗದಲ್ಲಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕಳೆದೆರಡು ತಿಂಗಳಿನಿಂದ ರಾಜ್ಯದ ಲೈಸೆನ್ಸ್ ಸರ್ವೆಯರ್ಗಳು ಮುಷ್ಕರ ನಡೆಸುತ್ತಿದ್ದು, ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಿ ಶುಕ್ರವಾರ ಉಡುಪಿ ಜಿಲ್ಲಾ ಲೈಸನ್ಸ್ ಸರ್ವೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕ ಕೆ. ರಘುಪತಿ ಭಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಲೈಸೆನ್ಸ್ ಸರ್ವೆಯವರ ಸಮಸ್ಯೆಗಳಾದ ಪೋಡಿಮುಕ್ತ ಹಣ ಬಾಕಿ ಮತ್ತು 2013ರಿಂದ ಸಾರ್ವಜನಿಕರಿಂದ ಕಟ್ಟಿಸಿಕೊಂಡ ತತ್ಕಾಲ್ ಪೋಡಿ ಒಂದು ಕಡತಕ್ಕೆ ನೀಡಬೇಕಿದ್ದ 800 ರೂ.ವನ್ನು ಇದುವರೆಗೂ ಪಾವತಿಸಿಲ್ಲ. 11ಇ ನಕ್ಷೆ ಅಡಿಯಲ್ಲಿ ಅಲಿನೇಷನ್, ವಿಭಾಗ, ಕ್ರಯ, ಇಂತಹ ಅಳತೆ ಪ್ರಕರಣಗಳಲ್ಲಿ ವಿಲೇ ತಕರಾರುವಿನಲ್ಲಿ ಅಪ್ಲೋಡ್ ಮಾಡಿದ ಕಡತಗಳ ಸಂಭಾವನೆ ಬಾಕಿ ಉಳಿಸಿಕೊಳ್ಳಲಾಗಿದೆ ಅವರು ವಿವರಿಸಿದರು.
ಈ ಸಮಸ್ಯೆಗಳನ್ನು ಪರಿಹರಿಸಿ ಹಣ ಪಾವತಿ ಹಾಗೂ ಸಂಭಾವನೆ ನೀಡುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳಿನಿಂದ ಜಿಲ್ಲಾ ಲೈಸೆನ್ಸ್ ಸರ್ವೆಯವರು ಮುಷ್ಕರ ನಡೆಸುತ್ತಿದ್ದಾರೆ. ಇವರ ಮುಷ್ಕರದಿಂದಾಗಿ ಉಡುಪಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಕಡತಗಳು ಇತ್ಯರ್ಥಕ್ಕೆ ಬಾಕಿ ಉಳಿದುಕೊಂಡಿವೆ ಅವರು ತಿಳಿಸಿದರು.
ತಮ್ಮ ಸಮಸ್ಯೆಗಳನ್ನು ಪರಿಹರಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕ ಕೆ. ರಘುಪತಿ ಭಟ್, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಹಾಗೂ ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.







