ಸಂವಿಧಾನದಲ್ಲಿ ಎಲ್ಲರ ಧಾರ್ಮಿಕ ಭಾವನೆಗೆ ಅವಕಾಶ: ಪರಾಶರನ್
ಉಡುಪಿ, ಎ.18: ನ್ಯಾಯಾಲಯಗಳು ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಇತ್ತೀಚಿಗೆ ಶ್ರೀರಂಗ, ಪುರಿ ದೇವಸ್ಥಾನಗಳಲ್ಲಿ ಕೊರೊನಾ ಕಾರಣದಿಂದ ಉತ್ಸವಗಳು ನಡೆಯಬೇಕೆ ಅಥವಾ ಬೇಡವೆ ಎಂಬ ವಿಷಯ ದಲ್ಲಿಯೂ ಅದು ಸಾಬೀತಾಗಿದೆ ಎಂದು ಸುಪ್ರೀಂ ಕೋರ್ಟ ನ್ಯಾಯವಾದಿ, ಅಯೋಧ್ಯಾ ಪ್ರಕರಣದಲ್ಲಿ ವಾದಿಸಿದ್ದ ಕೆ.ಪರಾಶರನ್ ಅವರ ಪುತ್ರಮೋಹನ್ ಪರಾಶರನ್ ಹೇಳಿದ್ದಾರೆ.
ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಮಠ ರಾಜಾಂಗಣ ದಲ್ಲಿ ರವಿವಾರ ಶ್ರೀರಾಮ ಹನುಮದುತ್ಸವದ ಪ್ರಯುಕ್ತ ‘ರಾಮಜನ್ಮ ಭೂಮಿಯ ಕೌತುಕದ’ ವಿಷಯದ ಕುರಿತು ವೀಡಿಯೋ ಉಪನ್ಯಾಸ ನೀಡಿದರು.
ಮಠಗಳ ಆಡಳಿತದಲ್ಲಿಯೂ ಸರಕಾರದ ಹಸ್ತಕ್ಷೇಪ ಸಲ್ಲದು ಎಂದು 1954 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸಂವಿಧಾನ ಎಲ್ಲ ಜನರ ಧಾರ್ಮಿಕ ಭಾವನೆಗೆ ಅವಕಾಶ ಕೊಡುತ್ತದೆ. ಇದರಲ್ಲಿ ರಾಜ್ಯ, ದೇಶದ ಆಡಳಿತಗಾರರ ಹಸ್ತಕ್ಷೇಪವಿಲ್ಲ. ಧಾರ್ಮಿಕ ವಿಚಾರಗಳಲ್ಲಿ ಭಕ್ತರ ನಂಬಿಕೆಗೆ ಮತ್ತು ಅಗತ್ಯದ ಧಾರ್ಮಿಕ ಆಚರಣೆಗೆ ಬಹಳ ಮಹತ್ವವಿದೆ ಎಂದರು.
ಕೆ.ಪರಾಶರನ್ ಅವರೂ ಕೂಡ ಆನ್ಲೈನ್ನಲ್ಲಿ ಪಾಲ್ಗೊಂಡಿದ್ದರು. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.